ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋದಿ ಅಲೆ ತಡೆಗೆ ಸಜ್ಜು’

Last Updated 9 ಏಪ್ರಿಲ್ 2014, 5:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೋದಿ ಅಲೆಯ ಸುನಾಮಿ ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ ಎಂದು ಭಾರತೀಯ ದಕ್ಷಿಣ ರೈಲ್ವೆ ವಲಯ ಪ್ರಯಾಣಿಕರ ಸೌಲಭ್ಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 13 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಪೂರ್ಣಗೊಳಿಸಿದ್ದು, ಜನರ ನಾಡಿಮಿಡಿತ ಅರ್ಥ ಮಾಡಿ­ಕೊಳ್ಳ­ಲಾಗಿದೆ. ರಾಜ್ಯದಲ್ಲಿ ಪಕ್ಷಕ್ಕೆ ಈ ಚುನಾವಣೆಯಲ್ಲಿ 20 ಸ್ಥಾನಗಳು ಲಭಿಸಲಿವೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷ ದಲಿತರು, ಹಿಂದುಳಿದವರು ಮತ್ತು ಅಲ್ಪ­ಸಂಖ್ಯಾ­ತರಿಗೆ ಅನ್ಯಾಯ ಮಾಡಿದೆ ಎಂದು ಬೇರೆ ಪಕ್ಷದವರು ಹೇಳುತ್ತಿದ್ದರೆಯೇ ಹೊರತು ಕಾಂಗ್ರೆಸ್‌ ಪಕ್ಷದಲ್ಲಿ ಈ ಮಾತನ್ನು ಯಾರು ಆಡುತ್ತಿಲ್ಲ. ಒಂದು ವೇಳೆ ಪಕ್ಷ ಈ ಜನರಿಗೆ ಅನ್ಯಾಯ ಮಾಡಿದ್ದರೆ, ಅವರ್‍್ಯಾರು ಪಕ್ಷ ಬೆಂಬಲಿಸುತ್ತಿರಲಿಲ್ಲ ಎಂದರು.

ಬಿಜೆಪಿ ರಾಜ್ಯದಲ್ಲಿ ನಡೆಸಿದ ದುರಾ­ಡಳಿತವನ್ನು ಯಾರು ಮರೆತ್ತಿಲ್ಲ. ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಬೇರೆ ಪಕ್ಷದವರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಲ್ಲಿ­ಕಾರ್ಜುನ ಖರ್ಗೆಯವರಿಗೆ ಮುಖ್ಯ­ಮಂತ್ರಿ ಸ್ಥಾನ ನೀಡಲು ಮುಖಂಡರು ನಿರ್ಧರಿಸಿದ್ದರು. ಆಗ ನಾವು ಹೇಳಿದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡ­ಬೇಕೆಂದು ಮಾಜಿ ಪ್ರಧಾನಿ ದೇವೇ­ಗೌಡರು ತಿಳಿಸುವ ಮೂಲಕ ಧರ್ಮ­ಸಿಂಗ್ ಹೆಸರನ್ನು ಸೂಚಿಸುವ ಮೂಲಕ ದಲಿತರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದರು ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ದಲಿತರಿಗೆ ಉತ್ತಮ ಖಾತೆಗಳನ್ನು ಪಕ್ಷ ನೀಡಿದೆ. ಜೆಡಿಎಸ್‌ ಬ್ಲಾಕ್ ಮೇಲ್ ಮಾಡಲು ಉದಯಿಸಿದ ಪಕ್ಷವಾಗಿ ಕಾಣುತ್ತಿದೆ. ಅದರ ನಾಟಕ ಈ ಚುನಾವಣೆಯಲ್ಲಿ ನಡೆಯುವುದಿಲ್ಲ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.­ಕುಮಾರಸ್ವಾಮಿ ಶಾಸಕರಾಗಿ ಆಯ್ಕೆ­ಯಾಗುತ್ತಾರೆ. ನಂತರ ಲೋಕಸಭೆಗೆ ನಿಂತು ಗೆದ್ದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜಕೀಯ ದೊಂಬರಾಟ ಆಡುತ್ತಿ­ದ್ದಾರೆಂದು ಟೀಕಿಸಿದರು.

ಗುಜರಾತ್‌ನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ದೇಶದಲ್ಲಿ 12ನೇ ಸ್ಥಾನವನ್ನು ಅಭಿವೃದ್ಧಿ­ಯಲ್ಲಿ ಆ ರಾಜ್ಯ ಪಡೆದಿದೆ. ಅಲ್ಲಿ ನಡೆದಿರುವ ಅಭಿವೃದ್ಧಿ ದೇಶಕ್ಕೆ ಮಾದರಿ­ಯಲ್ಲ. ಕಾರ್ಪೊರೇಟ್ ಕುಟುಂಬ­ಗಳು ಆ ರೀತಿ ಬಿಂಬಿಸಲು ಮುಂದಾಗಿವೆ ಎಂದು ಹೇಳಿದರು.

ಸೇವಾ ದಳದ ರಾಜ್ಯ ಮುಖ್ಯ ಸಂಘಟಕ ಭೀಮಶಂಕರ್ ಮಾತನಾಡಿ, ಸೇವಾ ದಳದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ­ಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆಂದರು. ರಾಜ್ಯ ಕಾರ್ಯದರ್ಶಿ ಹಾಲಪ್ಪಗೌಡ, ನವೀನ್, ಮಲ್ಲೇಶ್, ಸಿದ್ದರಾಮಯ್ಯ, ಆನಂದಕುಮಾರ್, ಹಿರೇಮಗಳೂರು ರಾಮಚಂದ್ರ, ನಗೀನಾ ಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT