ಹುಬ್ಬಳ್ಳಿ: ‘ಕಳೆದ 10 ವರ್ಷಗಳ ಕಾಂಗ್ರೆಸ್ ಆಡಳಿತದಿಂದ ದೇಶವನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ಬಿಜೆಪಿಗೆ ನರೇಂದ್ರ ಮೋದಿ ಮೂಲಕ ಸೂಕ್ತ ನಾಯಕತ್ವ ಸಿಕ್ಕಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಕೋರ್ಟ್ ವೃತ್ತದಲ್ಲಿ ಪಕ್ಷದ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಶುಕ್ರವಾರ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ‘ಇದು ರಾಜ್ಯದಲ್ಲೂ ಹೊಸ ರಾಜಕೀಯ ಧ್ರುವೀಕರಣಕ್ಕೂ ನಾಂದಿ ಆಗಲಿದೆ’ ಎಂದರು.
‘ಮೋದಿ ಅವರನ್ನು ಆಯ್ಕೆ ಮಾಡುವ ವಿಷಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಚರ್ಚೆ, ಕುತೂಹಲಕ್ಕೆ ಪಕ್ಷದ ಸಂಸದೀಯ ಮಂಡಳಿ ಸರಿಯಾದ ನಿರ್ಣಯ ತೆಗೆದುಕೊಳ್ಳುವ ಮೂಲಕ ಅಂತ್ಯಹಾಡಿದೆ. ಮೋದಿ ದೇಶದ ಯುವಜನರ ಆಶಾಕಿರಣ. ವಾಜಪೇಯಿ ನಾಯಕತ್ವದ ಬಳಿಕ ಪರಿವರ್ತನೆಯ ಹಾದಿಯಲ್ಲಿದ್ದ ಪಕ್ಷಕ್ಕೆ ಯೋಗ್ಯ, ಉತ್ತಮ ವ್ಯಕಿತ್ವ, ಅರ್ಹತೆಯ ವ್ಯಕ್ತಿ ಸಿಕ್ಕಿದ್ದಾರೆ’ ಎಂದರು.
‘ಮೋದಿ ಗುಜರಾತ್ ಮಾದರಿಯಲ್ಲಿ ದೇಶವನ್ನೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿದ್ದಾರೆ. ಅವರ ನಾಯಕತ್ವಕ್ಕೆ ರಾಜ್ಯದ ಜನರೂ ಸ್ಪಂದಿಸುವ ವಿಶ್ವಾಸವಿದ್ದು, ಅತಿ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲುವ ಭರವಸೆ ಇದೆ’ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ‘ಮೋದಿ ಭವಿಷ್ಯದ ಆಶಾಕಿರಣ. ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ಮಂಡಳಿ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದೆ’ ಎಂದರು.
‘ಮೋದಿ ಆಯ್ಕೆ ಪ್ರಕಟವಾಗುತ್ತಿದ್ದಂತೆ ಯುವ ಜನಾಂಗದಲ್ಲಿ ಸಂಚಲನ ಉಂಟಾಗಿದೆ. ಕೇಂದ್ರದಲ್ಲಿ ಯುಪಿಎ ಆಡಳಿತವನ್ನು ನಿರ್ನಾಮ ಮಾಡಲು ಪರ್ಯಾಯ ನಾಯಕತ್ವ ಬೇಕಿತ್ತು. ಮೋದಿ ಮೋಡಿ ಮಾಡುವ ಮೂಲಕ ಆ ಸ್ಥಾನವನ್ನು ತುಂಬಲಿದ್ದಾರೆ. ಮೋದಿ ಅಲೆಯಿಂದಾಗಿ ಪಕ್ಷ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ರಂಗಾ ಬದ್ದಿ ಮತ್ತಿತರರು ಇದ್ದರು.