ಯಾದಗಿರಿ: ಯುವ ಶಕ್ತಿ ಅದಮ್ಯವಾದ ಚೈತನ್ಯವನ್ನು ಹೊಂದಿದ್ದು, ಅದು ದೇಶದ ಅಭಿವೃದ್ಧಿಗೆ ಪೂರಕವಾದಲ್ಲಿ ಸಾರ್ಥಕವಾಗುತ್ತದೆ ಎಂದು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಲಗಿ ಹೇಳಿದರು.
ಮಂಗಳವಾರ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಶ್ರಮ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಕೈಗೊಳ್ಳುವ ದುಡಿಮೆ ದೇಶದ ಒಳಿತಿಗಾಗಿ ಸಲ್ಲುತ್ತದೆ. ವಿದ್ಯಾರ್ಥಿಗಳು ನಿಷ್ಠೆಯಿಂದ ದುಡಿಯುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎನ್.ಎಸ್.ಎಸ್. ಸಾಗಿ ಬಂದ ದಾರಿಯನ್ನು ವಿವರಿಸಿದ ಅವರು, ವಿದ್ಯಾರ್ಥಿಗಳಲ್ಲಿ ಜಾತಿ, ಮತ, ಪಂಥ, ಪಂಗಡಗಳ ಬೇಧ ಭಾವ ದೂರ ಮಾಡಿ ಎಲ್ಲರೂ ಒಂದೇ ಎಂಬ ಭಾವ ಮೂಡಬೇಕು. ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪುಗೊಳ್ಳಲು ಎನ್.ಎಸ್.ಎಸ್. ಸೂಕ್ತ ವೇದಿಕೆಯಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಎನ್ಎಸ್ಎಸ್ ಅಧಿಕಾರಿ ಮೋನಯ್ಯ ಕಲಾಲ, ಮಲ್ಲಾರೆಡ್ಡಿ ಪಾಟೀಲ, ಅಶೋಕ ವಾಟ್ಕರ, ಶರಣಬಸ್ಸಪ್ಪ ರಾಯಕೋಟಿ, ಡಾ. ಜಗನ್ನಾಥ ಪಟ್ಟಣಕರ, ಆಂಜನೇಯ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು. ನಂತರ ಎನ್ಎಸ್ಎಸ್ ಸ್ವಯಂ ಸೇವಕರು ವಿಶೇಷ ಶ್ರಮದಾನ ಮಾಡಿದರು.