ಯಾದಗಿರಿ: ದೇಶ ಕಾಯುವ ಸೈನಿಕರು ಹಾಗೂ ದೇಶದ ಕ್ರೀಡಾಪಟುಗಳು ಯುವಕರಾಗಿದ್ದು, ಅವರಿಂದಲೇ ದೇಶದ ಕೀರ್ತಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವಕರಿಗೆ ಪ್ರಾಧಾನ್ಯತೆ ನೀಡಲು ನಿರ್ಧರಿಸಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣಿ ಹೇಳಿದರು.
ಇಲ್ಲಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಗುರುವಾರ ಆಯೋಜಿಸಿದ್ದ ನರೇಂದ್ರ ಕೋ ನಮನ್ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಬದಲಾವಣೆ ತರಲು ದೇಶಕ್ಕೆ ನರೇಂದ್ರ ಮೋದಿ ನಾಯಕತ್ವ ಅವಶ್ಯವಾಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಅಭಿವೃದ್ಧಿಗೆ ವೇಗ ತರಲು ಸಮರ್ಥ ನಾಯಕತ್ವ ಉಳ್ಳವರ ಅವಶ್ಯಕತೆ ಇದ್ದು, ಅಂತಹ ಸಮರ್ಥ ನಾಯಕತ್ವ ನರೇಂದ್ರ ಮೋದಿಯವರು ಹೊಂದಿದ್ದಾರೆ. ಯುವ ಜನತೆ ಮೋದಿ ಬೆಂಬಲಕ್ಕೆ ನಿಂತು, ಅವರನ್ನು ಬೆಂಬಲಿಸಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ತಿಳಿಸಿದರು.
ಕ್ರೀಡಾಕೂಟಗಳು ಜಾತಿ, ಮತ,ಪಂಥಗಳನ್ನು ಮೀರಿ ಸ್ನೇಹ, ಸೌಹಾರ್ದವನ್ನು ಬೆಳೆಸುವ ವೇದಿಕೆಗಳಾಗಿವೆ. ಯುವ ಜನತೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಭ್ರಾತೃತ್ವ ಮತ್ತು ಸ್ನೇಹ ಬೆಳೆಯಲು ಸಹಕಾರಿ ಆಗಲಿದೆ. ಈ ಆಶಯದೊಂದಿಗೆ ಬಿಜೆಪಿ ಯುವ ಮೋರ್ಚಾ ಕ್ರಿಕೆಟ್ ಟೂರ್ನಿ ಆಯೋಜಿಸಿದೆ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಯಿಂದ ಮಾತ್ರ ಯುವಕರಲ್ಲಿ ದೈಹಿಕ, ಮಾನಸಿಕ ಪ್ರಗತಿಯಾಗಲು ಸಾಧ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ ಹೇಳಿದರು. ಯುವ ಪಡೆ ದುಶ್ಚಟಗಳಿಂದ ದೂರವಾಗಿ ಕ್ರೀಡೆಗಳತ್ತ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ರವೀಂದ್ರರಡ್ಡಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳುವ ಮೂಲಕ ಯುವ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಭೆ ಪ್ರದರ್ಶಿಲು ವೇದಿಕೆ ಕಲ್ಪಿಸಿದೆ. ಕ್ರೀಡಾ ಪಟುಗಳು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಅಂಬಿಗೇರ ಮಾತನಾಡಿ, ಜಿಲ್ಲೆಯಲ್ಲಿ ಯುವಕರನ್ನು ಒಗ್ಗೂಡಿಸಿ ಅವರ ಮೂಲಕ ಅಭಿವೃದ್ಧಿಯ ದೃಷ್ಟಿಕೋನವುಳ್ಳ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲಿಸಲು ಪಕ್ಷ ಸಂಘಟಿಸಲಾಗುವುದು ಎಂದು ಹೇಳಿದರು.
ಲಿಂಗಪ್ಪ ಹತ್ತಿಮನಿ, ವೆಂಕಟರಡ್ಡಿ ಅಬ್ಬೆತುಮಕೂರ, ಭೀಮರಾಯ ಜಂಗಳಿ, ಮಲ್ಲಿಕಾರ್ಜುನ ಗುಳೇದ, ಬಸವರಾಜಗೌಡ ಬಿಳ್ಹಾರ, ಮಂಜು ಜಡಿ, ಅಯ್ಯಣ್ಣ ಅಳ್ಳಳ್ಳಿ, ಹಣಮಂತ ಇಟಗಿ, ಗೋಪಾಲ ದಾಸನಕೇರಿ, ಸಾಯಿಬಣ್ಣ ಚಂಡ್ರಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ಟೂರ್ನಿಯಲ್ಲಿ ಒಟ್ಟು 45 ತಂಡಗಳು ಭಾಗವಹಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.