ಹುಮನಾಬಾದ್: ಆಹಾರ ಧಾನ್ಯ ಉತ್ಪಾದಿಸುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಧಿಕ ಇಳುವರಿ ತೆಗೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೀರಣ್ಣ ಎಚ್.ಪಾಟೀಲ ರೈತರಿಗೆ ಸಲಹೆ ನೀಡಿದರು.
ತಾಲ್ಲೂಕಿನ ಸಿತಾಳಗೇರಾ ಗ್ರಾಮದಲ್ಲಿ ಕೃಷಿ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಕಡಲೆ ಬೆಳೆ ಸಮಗ್ರ ಪೀಡೆ ನಿರ್ವಹಣೆ ಕಿಟ್ ವಿತರಣಾ ಕಾರ್ಯಕ್ರಮ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ವಿಧಾನ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಸದಸ್ಯ ಬಾಬುರಾವ ಎಸ್.ಟೈಗರ್ ,ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ರೈತರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಶೇ 90ರಷ್ಟು ರಿಯಾಯ್ತಿ ದರದಲ್ಲಿ, ಇತರೆ ರೈತರಿಗೆ ಶೇ 75ರಷ್ಟು ರಿಯಾಯ್ತಿ ದರದಲ್ಲಿ ವಿವಿಧ ಕೃಷಿ ಸಾಮಗ್ರಿಗಳನ್ನು ವಿತರಿಸುತ್ತಿದ್ದು, ಸಿತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಪ್ರತಿ ರೈತರಿಗೆ ಎರಡು ಕಿಟ್ಗಳಂತೆ ಒಟ್ಟು 256 ರೈತರಿಗೆ ಕಿಟ್ ವಿತರಿಸಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ ಮಲ್ಲಿಕಾರ್ಜುನ ಮಾತನಾಡಿ, ಕಬ್ಬಿನ ಇಳುವರಿ ಸಂಬಂಧ ಅನುಸರಿಸಬೇಕಾದ 12 ವಿನೂತನ ಅಂಶ, ಅಧಿಕ ತೊಗರಿ ಇಳುವರಿಗೆ ಸಂಬಂಧಿಸಿದ 14ಅಂಶ, ಅಧಿಕ ಸೋಯಾ ಅವರೆ ಇಳುವರಿ ಕುರಿತು 12ಅಂಶಗಳು ಹಾಗೂ ಮಣ್ಣಿನ ಸಂರಕ್ಷಣೆ ಹಾಗೂ ಅಧಿಕ ಉಳುವರಿ ಸಂಬಂಧ ಕಾಂಪೊಸ್ಟ್ ತಯಾರಿಕೆ ಹಾಗೂ ಬಳಕೆ ವಿಧಾನ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥ, ಕಾರ್ಯಾಗಾರದಲ್ಲಿನ ಮಾಹಿತಿಯನ್ನು ರೈತರು ಕೃಷಿ ಚಟುವಟಿಕೆಯಲ್ಲಿ ಬಳಸಿಕೊಂಡಾಗ ಮಾತ್ರ ಅಧಿಕಾರಿಗಳ ಶ್ರಮ ಸಾರ್ಥಕ ಎಂದರು.
ಕೃಷಿಕ ಸಮಾಜ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡ್ಗುಳ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾನಂದಾ ಬಾಬುರಾವ, ಸದಸ್ಯರುಗಳಾದ ಭೀಮರಾವ, ಮುದುಕಪ್ಪ, ಶಿವಪುತ್ರಪ್ಪ, ಸುನಂದಾ, ಬಸವರಾಜ ಮಾಳಗೆ, ಶಿವಾನಂದ, ವಿಜಯಕುಮಾರ ಪಾಟೀಲ, ಹರೀಶಕುಮಾರ ವೇದಿಕೆಯಲ್ಲಿ ಇದ್ದರು. ಸುಭಾಷ ಗಂಗಾ ನಿರೂಪಿಸಿದರು. ರೈತ ಸಂಪರ್ಕ ಕೇಂದ್ರ ಅಧಿಕಾರಿ ಪಾಂಡುರಂಗ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.