ಬೆಂಗಳೂರು: ರವೀಂದ್ರ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ ‘ನಾಟಕ ಬೆಂಗ್ಳೂರು’ ತಂಡವು ಸುವರ್ಣ ರಂಗಸಂಭ್ರಮ ಲಾಂಛನವನ್ನು ಅನಾವರಣ ಮಾಡಿತು.
ನಗರದ ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಜ್ಯಸಭೆ ಸದಸ್ಯೆ ಬಿ.ಜಯಶ್ರೀ ಮಾತನಾಡಿ, ‘ನಾಟಕ ಪರಂಪರೆಯನ್ನು ಇಂದಿನ ಯುವಜನತೆ ಬೆಳೆಸಿಕೊಂಡು ಹೋಗಬೇಕು. ನಾಟಕ ಪರಂಪರೆ ಇನ್ನೂ ಶ್ರೀಮಂತವಾಗಿ ಬೆಳೆಯಬೇಕು’ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ‘ನಮ್ಮ ಪೀಳಿಗೆಯವರು ನಾಟಕ ಮಾಡುವ ವೇಳೆಯಲ್ಲಿ ಹಣದ ಲೆಕ್ಕಾಚಾರ ಮತ್ತು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಾಟಕ ಪ್ರದರ್ಶನ ನಡೆಯುತ್ತಿತ್ತು. ಆದರೆ, ಇಂದಿನ ಯುವ ತಂಡಗಳು ಆಸಕ್ತಿಪೂರ್ವಕವಾಗಿ ಮಾಡುತ್ತಿವೆ’ ಎಂದರು.
‘ಎಲ್ಲಾ ರಂಗಸಂಸ್ಥೆಗಳು ಸೇರಿ ಒಟ್ಟಾಗಿ ಈ ರಂಗಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಇದರಲ್ಲಿ ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆಯದೆ ಎಲ್ಲವನ್ನೂ ರಂಗತಂಡಗಳೇ ಹಣವನ್ನು ಹೊಂದಿಸಿಕೊಂಡು ಮಾಡುತ್ತಿವೆ. ಇದು ಹೊಸದಾರಿಗೆ ಎಡೆ ಮಾಡಿಕೊಡುತ್ತದೆ’ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ‘ರಂಗಭೂಮಿಯಲ್ಲಿ ಮಾತ್ರ ಜಾತ್ಯತೀತ ಲಿಂಗಾತೀತ ಮತ್ತು ಧರ್ಮಾತೀತವಾಗಿ ಇರಲು ಸಾಧ್ಯ. ಅದನ್ನು ರಂಗಭೂಮಿ ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿದೆ’ ಎಂದರು.
ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ, ‘ಸರ್ಕಾರದ ಬೆಂಬಲವಿಲ್ಲದೆ ರಂಗ ಪ್ರದರ್ಶನವಾಗುತ್ತಿರುವುದು ಸಂತಸವಾಗಿದೆ. ಪ್ರೇಕ್ಷಕರ ಬೆಂಬಲದಿಂದ ನಾಟಕ ಉಳಿಯುತ್ತದೆ. ನಾಟಕಕ್ಕೆ ಪ್ರೇಕ್ಷಕರ ಪ್ರೋತ್ಸಾಹವೊಂದೇ ಸಾಕು’ ಎಂದು ಹೇಳಿದರು.
ಡಿಸೆಂಬರ್ನಿಂದ ಫೆಬ್ರುವರಿ ವರೆಗೆ ಮೂರು ತಿಂಗಳು ನಾಟಕ ಪ್ರದರ್ಶನ ನಡೆಯಲಿದೆ. ಒಟ್ಟು 52 ನಾಟಕಗಳು ಪ್ರದರ್ಶನಗೊಳ್ಳಲಿವೆ. ಮಾರ್ಚ್ ತಿಂಗಳು ಸುವರ್ಣ ಸಂಭ್ರಮ ಆಚರಣೆ ನಡೆಯಲಿದೆ.