ಭಾಲ್ಕಿ: ತಾಲ್ಲೂಕಿನ ವರವಟ್ಟಿ ವಾಡಿ ಯಿಂದ ಉಚ್ಚಾ ಗ್ರಾಮದ ನಾಲ್ಕೂವರೆ ಕಿ.ಮೀ ರಸ್ತೆ ನಿರ್ಮಾಣಕ್ಕೆ ರೂ. 1.50 ಕೋಟಿ ಹಣ ಮಂಜೂರು ಮಾಡಿಸ ಲಾಗಿದೆ. ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಸಂಸದ ಧರ್ಮಸಿಂಗ್ ನುಡಿದರು.
ತಾಲ್ಲೂಕಿನ ಉಚ್ಚಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬೀದರ ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಗಳಾದ ಜಹೀರಾಬಾದ, ಬೀದರ, ಭಾಲ್ಕಿ, ಉದಗೀರ್ ಅಂತರರಾಜ್ಯ ರಸ್ತೆಗಳನ್ನು ಶೀಘ್ರದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಬೀದರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ಪಶುವೈದ್ಯಕೀಯ ಮಹಾವಿದ್ಯಾಲಯ, ಶ್ರೀರಂಗಪಟ್ಟಣ–ಬೀದರ ಹೆದ್ದಾರಿ ಮುಂತಾದ ಬೃಹತ್ ಕಾಮಗಾರಿ ಕೈಗೊಳ್ಳುವ ಮೂಲಕ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಬಣ್ಣಿಸಿದರು.
ಗ್ರಾ.ಪಂ. ಅಧ್ಯಕ್ಷೆ ರೂಪಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ವೆಂಕಟರಾವ ಬಿರಾದಾರ, ಪುರಸಭೆ ಸದಸ್ಯ ವಿಶ್ವನಾಥ ಮೋರೆ, ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಮರಾವ ಬಿರಾದಾರ ವರವಟ್ಟಿಕರ್, ದಿಲೀಪ ನಿರಗುಡೆ, ವಿಠಲರಾವ ಪಾಟೀಲ ಇದ್ದರು.