ಬೆಂಗಳೂರು: ‘ರಾಸಾಯನಿಕ ವಿಪತ್ತು ಸಂಭವಿಸಿದಾಗ ತುರ್ತು ಪರಿಹಾರ ಕೈಗೊಳ್ಳುವ ಸೂಕ್ತ ವ್ಯವಸ್ಥೆಯೇ ನಮ್ಮ ಬಳಿ ಇಲ್ಲ. ಅನಿಲಗಳ ರಾಸಾಯನಿಕ ಪ್ರಕ್ರಿಯೆ ಕುರಿತು ಯಾರೊಬ್ಬರಿಗೂ ಮಾಹಿತಿ ಇಲ್ಲ’ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಐಜಿಪಿ ಕೆ.ಎಲ್.ಸುಧೀರ್ ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬುಧವಾರ ನಗರದಲ್ಲಿ ಆಯೋಜಿಸಿದ್ದ ‘ರಾಸಾಯನಿಕ ದುರಂತ ತಡೆ ದಿನ’ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಪರಸ್ಪರ ಇಲಾಖೆಗಳ ನಡುವೆ ಸಂವಹನ ಕೊರತೆ, ಯಾವ ರಾಸಾಯನಿಕ ಅನಿಲ ಸ್ಫೋಟ ಸಂಭವಿಸಿದಾಗ ಏನು ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ ಅಗ್ನಿ ಶಾಮಕ ದಳದ ಸಿಬ್ಬಂದಿಗೂ ಇಲ್ಲ’ ಎಂದರು.
‘ರಾಸಾಯನಿಕ ದುರಂತ ಸಂಭವಿಸಿದಾಗ, ರಾಸಾಯನಿಕದ ಮಾಹಿತಿ ಮತ್ತು ಪರಿಣಾಮದ ಕುರಿತು ತಿಳಿಯಲು ಕೊಚ್ಚಿನ್, ಅಹಮದಾಬಾದ್, ಚೆನ್ನೈ, ದೆಹಲಿಯಲ್ಲಿನ ವಿಷಕಾರಿ ರಾಸಾಯನಿಕ ಮಾಹಿತಿ ಕೇಂದ್ರಗಳಿಗೆ ಕಳುಹಿಸಬೇಕು. ಆಗ ತಕ್ಷಣದ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ವಿಷಾದಿಸಿದರು.
‘ಇತ್ತೀಚೆಗೆ ನಡೆದ ಕಟ್ಟಡದ ಕುಸಿತದ ವೇಳೆ ಕಟ್ಟಡ ಅವಶೇಷಗಳ ಅಡಿಯ ದೇಹಗಳನ್ನು ಹೊರತೆಗೆಯಲು ಜೆಸಿಬಿ ಯಂತ್ರದ ದೂರವಾಣಿ ಸಂಖ್ಯೆ ಬಿಬಿಎಂಪಿ ಅಧಿಕಾರಿಗಳ ಬಳಿ ಇರಲಿಲ್ಲ. ಹೀಗೆ ಇಲಾಖೆಗಳ ಸಮನ್ವಯ ಕೊರತೆ ಎದ್ದುಕಾಣುತ್ತದೆ’ ಎಂದರು.
‘ಕೈಗಾರಿಕೆಗಳು ಮತ್ತು ದಾಸ್ತಾನು ಮಳಿಗೆಗಳಲ್ಲಿ ಸಂಭವಿಸುವ ಆಕಸ್ಮಿಕ ರಾಸಾಯನಿಕ ಅನಿಲ ದುರಂತಗಳಲ್ಲದೇ, ಭಯೋತ್ಪಾದಕರೂ ರಾಸಾಯನಿಕ ದಾಳಿಗೆ ಮುಂದಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಭಯೋತ್ಪಾದಕರು ನಗರದಲ್ಲಿ ರಾಸಾಯನಿಕ ದಾಳಿ ನಡೆಸಲು ಯೋಜನೆ ರೂಪಿಸುತ್ತಿರುವುದಾಗಿ 2010 ರಲ್ಲಿ ವರದಿ ಬಂದಿದ್ದು, ಗುಪ್ತಚರ ಇಲಾಖೆಯೂ ಧೃಢೀಕರಿಸಿದೆ’ ಎಂದರು.