ಬೆಂಗಳೂರು: ನಗರದ ಪೀಣ್ಯ ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ಮೆಟ್ರೊ ರೀಚ್ 3 ಮತ್ತು3ಎ ಮಾರ್ಗ ಗಳ ಸಂಚಾರ ಸುರಕ್ಷಾ ವ್ಯವಸ್ಥೆಯನ್ನು ಪರೀಕ್ಷಿಸಲು ವಿನ್ಯಾಸ ಮತ್ತು ಗುಣಮಟ್ಟ ಸಂಶೋಧನಾ ಸಂಸ್ಥೆ (ಆರ್ಡಿಎಸ್ಒ) ತಂಡ ಡಿ.12ರಂದು ಬರಲಿದೆ.
ಸುರಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲು ಆರ್ಡಿಎಸ್ಒ ತಂಡಕ್ಕೆ ಕನಿಷ್ಠ ಮೂರು ವಾರಗಳ ಅಗತ್ಯವಿದೆ. ಅಲ್ಲಿಂದ ಪ್ರಮಾಣ ಪತ್ರ ಸಿಕ್ಕ ಮೇಲಷ್ಟೇ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಹೇಳುತ್ತಾರೆ.
‘ಇನ್ನೆರಡು ದಿನಗಳಲ್ಲಿ ಆರ್ಡಿ ಎಸ್ಒ ತಂಡ ಬರಲಿದ್ದು, ತಪಾಸಣಾ ಪ್ರಕ್ರಿಯೆ ಮುಗಿಯಲು ಸಾಕಷ್ಟು ಕಾಲಾವಕಾಶ ಬೇಕಿದೆ’ ಎಂದು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ವಿವರಿಸುತ್ತಾರೆ.
ಸುರಕ್ಷಾ ತಪಾಸಣಾ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವರೆಗೆ ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಸಂಚಾರ ಆರಂಭಕ್ಕೆ ನಿಗಮ ಈ ಮೊದಲು ಪ್ರಕಟಿಸಿದ ಅವಧಿಗಿಂತ ಒಂದೂವರೆ ತಿಂಗಳಷ್ಟು ವಿಳಂಬ ವಾಗುವ ಸಾಧ್ಯತೆ ಇದೆ. ಈ ಮೊದಲು ಪೀಣ್ಯ–ಯಶವಂತಪುರ ಮಾರ್ಗದಲ್ಲಿ ವರ್ಷಾಂತ್ಯದ ವೇಳೆಗೆ ಸಂಚಾರ ಆರಂಭವಾಗಲಿದೆ ಎಂದು ಘೋಷಿಸ ಲಾಗಿತ್ತು.
ಆರ್ಡಿಎಸ್ಒದಿಂದ ಪ್ರಮಾಣ ಪತ್ರ ಸಿಕ್ಕಮೇಲೆ ರೈಲ್ವೆ ಸುರಕ್ಷಾ ಆಯುಕ್ತರಿಗೆ (ಸಿಆರ್ಎಸ್) ಪತ್ರ ಬರೆಯಲಾಗು ತ್ತದೆ. ಸಿಆರ್ಎಸ್ನಿಂದ ಅನುಮತಿ ಸಿಕ್ಕ ಬಳಿಕ ಸಂಚಾರ ಆರಂಭಿಸಲಾಗುತ್ತದೆ. ರೀಚ್–3 ಮಾರ್ಗದಲ್ಲಿ ಎಲ್ಲ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ, ನಿಲ್ದಾಣಗಳ ನಿರ್ಮಾಣ ಕೆಲಸ ಮಾತ್ರ ಬಾಕಿ ಇದೆ. ಯಶ ವಂತಪುರ ಶೇ 95, ಮಹಾಲಕ್ಷ್ಮಿ ಶೇ 94, ಸೋಪ್ ಫ್ಯಾಕ್ಟರಿ ಶೇ 74, ರಾಜಾಜಿನಗರ ಶೇ 97ಮತ್ತು ಕುವೆಂಪು ನಗರ ನಿಲ್ದಾಣ ನಿಲ್ದಾಣ ಕಾಮಗಾರಿ ಶೇ 81ರಷ್ಟು ಮುಗಿದಿದೆ.
ಹತ್ತು ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಹಲವು ರೈಲುಗಳನ್ನು ಮೆಟ್ರೊ ನಿಗಮ ಓಡಿಸಲಿದ್ದು, ನಿತ್ಯ 45,00 0ದಿಂದ 50,000 ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ‘ರೀಚ್–3ಎ’ ದಲ್ಲೂ ಸಂಚಾರ ಆರಂಭವಾದಾಗ ನಿತ್ಯ ಓಡಾಡುವ ಪ್ರಯಾಣಿಕರ ಸಂಖ್ಯೆ 75,000ಕ್ಕೆ ಹೆಚ್ಚಲಿದೆ ಎಂದು ಹೇಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.