ನವದೆಹಲಿ: ದೆಹಲಿಯಲ್ಲಿ ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡುವುದಕ್ಕೂ ಮೊದಲು ಈ ಕುರಿತ ಎಲ್ಲ ಸಾಧ್ಯತೆಗಳ ಬಗ್ಗೆ ಲೆಫ್ಟಿನಂಟ್ ಗವರ್ನರ್ ಅವರು ಪರಿಶೀಲನೆ ನಡೆಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಸೋಮವಾರ ತಿಳಿಸಿದರು.
‘ಯಾವ ಪಕ್ಷಕ್ಕೂ ಸರ್ಕಾರ ರಚನೆ ಮಾಡುವಷ್ಟು ಸರಳ ಬಹುಮತ ದೊರಕದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗುವುದೇ’ ಎಂಬ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಮಿತ್ರ ಪಕ್ಷ ಅಕಾಲಿ ದಳದ ಒಬ್ಬರು ಸೇರಿದಂತೆ 32 ಹೊಸ ಶಾಸಕರನ್ನು ಬಿಜೆಪಿ ಹೊಂದಿದೆ. ಸರಳ ಬಹುಮತಕ್ಕೆ ಇನ್ನೂ ನಾಲ್ವರ ಬೆಂಬಲ ಅಗತ್ಯವಿದೆ.
ಬಹುಮತದ ಕೊರತೆಯ ಕಾರಣ ಬಿಜೆಪಿ ಏನಾದರೂ ಸರ್ಕಾರ ರಚಿಸಲು ಮುಂದಾಗದಿದ್ದರೆ ನಂತರ ಲೆಫ್ಟಿನೆಂಟ್ ಗವರ್ನರ್ ಅವರು, ಎರಡನೇ ಅತಿ ದೊಡ್ಡ ಪಕ್ಷವಾಗಿರುವ (28 ಸ್ಥಾನಗಳು) ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸರ್ಕಾರ ರಚಿಸಲು ಆಹ್ವಾನ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.
ಸಾಧ್ಯತೆಗಳು: ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅವರು ಆಹ್ವಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆ ಈ ಪಕ್ಷಗಳು ಸರ್ಕಾರ ರಚನೆಗೆ ಮುಂದಾಗದಿದ್ದರೆ ಆಗ ಲೆಫ್ಟಿನೆಂಟ್ ಗವರ್ನರ್ ಅವರು ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಡಾ. ಹರ್ಷವರ್ಧನ್ ಮತ್ತು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
ಈ ಮಾತುಕತೆಯ ನಂತರ ಲೆಫ್ಟಿನೆಂಟ್ ಗವರ್ನರ್ ಅವರು ಗೃಹ ಸಚಿವಾಲಯಕ್ಕೆ ವರದಿ ಕಳುಹಿಸಿ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬಹುದು.
ಈ ಶಿಫಾರಸನ್ನು ಗೃಹ ಸಚಿವಾಲಯವು ಸಂಪುಟದ ಮುಂದೆ ಪ್ರಸ್ತಾಪಿಸಲಿದೆ. ಇದು ಸಮಂಜಸವಾಗಿದ್ದರೆ ಆಗ ಸಂಪುಟವು ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿ, ದೆಹಲಿ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸುವ ಸಾಧ್ಯತೆಯೂ ಇದೆ.
‘ಗೃಹ ಇಲಾಖೆ ಪಾತ್ರವಿಲ್ಲ’
‘ದೆಹಲಿಯಲ್ಲಿ ಹೊಸ ಸರ್ಕಾರ ರಚನೆ ವಿಚಾರದಲ್ಲಿ ಸದ್ಯಕ್ಕೆ ಗೃಹ ಸಚಿವಾಲಯದ ಪಾತ್ರ ಏನೂ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.