ಮುಂಬೈ (ಪಿಟಿಐ): ಲೋಕಪಾಲ್ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಗುರುವಾರ ಒತ್ತಾಯಿಸಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ, ಹೊಸ ಮಸೂದೆಯಿಂದ ಕೇವಲ ‘40 ರಿಂದ 50’ರಷ್ಟು ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗಲಿದೆ ಎಂದಿದ್ದಾರೆ.
‘ಕೇವಲ ಲೋಕಪಾಲ್ ಕಾಯ್ದೆಯಿಂದ 'ಭ್ರಷ್ಟಾಚಾರ ರಹಿತ ಭಾರತ'ದ ಕನಸು ನನಸಾಗದು. ಅದರ ಪರಿಣಾಮಕಾರಿ ಅನುಷ್ಠಾನ ಸದ್ಯದ ತುರ್ತು’ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ, ‘ಜನಪ್ರತಿನಿಧಿಗಳನ್ನು ತಿರಸ್ಕರಿಸುವ ಹಕ್ಕು, ಹಿಂದಕ್ಕೆ ಕರೆಯಿಸಿಕೊಳ್ಳುವ ಹಕ್ಕು, ಗ್ರಾಮ ಸಭೆಗಳ ಸಬಲೀಕರಣ ಮತ್ತು ನಾಗರಿಕ ಸನ್ನದ್ದುಗಳಂತ ಕಾನೂನುಗಳಿಗಾಗಿ ನಾವು ಹೋರಾಡಬೇಕಿದೆ’ ಎಂದು ಪುಣೆಯ ಜಿಲ್ಲೆಯಲ್ಲಿರುವ ತಮ್ಮ ಸ್ವಗ್ರಾಮ ರಾಳೆಗಣ ಸಿದ್ಧಿಯಲ್ಲಿ ಹೇಳಿದ್ದಾರೆ.
ಅಲ್ಲದೇ, ಭ್ರಷ್ಟಾಚಾರದ ವಿರೋಧಿ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ‘ಪ್ರಾಮಾಣಿಕ, ಸಮರ್ಥ ನಾಗರಿಕರನ್ನು’ ಸಂಘಟಿಸಲು ಶೀಘ್ರವೇ ರಾಷ್ಟ್ರವ್ಯಾಪಿ ಪ್ರವಾಸ ನಡೆಸುವುದಾಗಿ ತಿಳಿಸಿದ್ದಾರೆ.