ಶ್ರೀರಂಗಪಟ್ಟಣ: ಇಲ್ಲಿನ ಪೂರ್ಣಯ್ಯ ಭವನದಲ್ಲಿ ಯಕ್ಷ ಕೌಮುದಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಭಾನುವಾರ ಏರ್ಪಡಿಸಿದ್ದ ಅಮೋಘ ತಾಳ ಮದ್ದಳೆ ಪ್ರದರ್ಶನ ಮತ್ತು ಸಂಸ್ಕಾರ ಭಾರತಿ ತಾಲ್ಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರು ರಾಮಾಯಣದ ’ವಾಲಿಯ ವಧೆ’ ಪ್ರಸಂಗವನ್ನು ಪ್ರಸ್ತುಪಡಿಸಿದರು.
ವಾಲಿಯಾಗಿ ಗ.ನಾ.ಭಟ್, ಸುಗ್ರೀವನಾಗಿ ಸೇರಾಜೆ ಸೀತಾರಾಮ ಭಟ್, ಶ್ರೀರಾಮನಾಗಿ ಕುಂಬ್ಳೆ ಗಣರಾಜ್ ಹಾಗೂ ತಾರೆಯ ಪಾತ್ರವನ್ನು ಕಬ್ಬಿನಾಲೆ ಡಾ.ವಸಂತ ಭಾರದ್ವಾಜ್ ನಿರ್ವಹಿಸಿದರು.
ಸುಮಾರು ಎರಡು ತಾಸು ವಾಲಿಯ ವಧೆ ಪ್ರಸಂಗ ನಡೆಯಿತು. ಯಲ್ಲಾಪುರದ ತಿಮ್ಮಪ್ಪ ಹೆಗಡೆ ಭಾಗವತಿಕೆ ನಡೆಸಿಕೊಟ್ಟರು. ಶಿರಸಿಯ ಶ್ರೀಪಾದಭಟ್ಮೃದಂಗ ನುಡಿಸಿದರು.
ಇದಕ್ಕೂ ಮುನ್ನ ಸಂಸ್ಕಾರ ಭಾರತಿ ತಾಲ್ಲೂಕು ಘಟಕವನ್ನು ನಾಗಸ್ವರ ವಿದ್ವಾನ್ ಪಿ.ರಾಜಗೋಪಾಲ್ ಉದ್ಘಾಟಿಸಿದರು. ಡಾ.ಭಾನುಪ್ರಕಾಶ್ ಶರ್ಮಾ ಮಾತನಾಡಿ, ನಾಗರಿಕತೆಯ ನಾಗಾಲೋಟದಲ್ಲಿ ನಮ್ಮ ಮೂಲ ಸಂಸ್ಕೃತಿ, ಪರಂಪರೆಯನ್ನು್ನ ಇಂದಿನ ಪೀಳಿಗೆ ಮರೆಯುತ್ತಿದೆ. ಕಲೆ, ಸಂಗೀತ, ನೃತ್ಯಗಳ ಪ್ರಕಾರಗಳಿಗೆ ಮರು ಜೀವ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಂಸ್ಕಾರ ಭಾರತಿ ತಾಲ್ಲೂಕು ಅಧ್ಯಕ್ಷ ಆರ್.ರಂಗನಾಥ್, ಕಬ್ಬಿನಾಲೆ ಡಾ.ವಸಂತ ಭಾರದ್ವಾಜ್, ಡಿ.ಪಿ.ಪ್ರಹ್ಲಾದರಾವ್ ಇದ್ದರು. ವಿದುಷಿಯರಾದ ಕೃಪಾ ಫಡ್ಕೆ, ವಿದ್ಯಾ ರವಿಶಂಕರ್, ಗೀತಾ ಹೆಗಡೆ ಇತರರು ಇದ್ದರು.