ಯಾದಗಿರಿ: ಮಕ್ಕಳ ಭೌತಿಕ ಬೆಳವಣಿಗೆಗೆ ವಿಜ್ಞಾನದ ಅನ್ವೇಷಣಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ತರುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನದ ಬಗ್ಗೆ ದಿನೇ ದಿನೇ ಹೊಸ ಅನ್ವೇಷಣೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದು ಉಪನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಬಿ.ಯಂಕೋಬ ಅಭಿಪ್ರಾಯಪಟ್ಟರು.
ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಮಾರುತಿ ಹುಜರಾತಿ ಮಾತನಾಡಿ, ವಿದ್ಯಾರ್ಥಿಗಳಿಗೆ ಈಗ ಪ್ರತಿಯೊಂದು ವಿಷಯ ಅರಿತುಕೊಳ್ಳಲು ಇಂದಿನ ಮಾಧ್ಯಮ ಹಾಗೂ ತಂತ್ರಜ್ಞಾನಗಳು ಪೂರಕವಾಗಿವೆ. ಜಗತ್ತಿನಲ್ಲಿ ನಡೆಯುವ ವಿಜ್ಞಾನದ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಕರು ತೋರಿಸಿ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.
ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಬಸನಗೌಡ ಹಾಗೂ ಯಾದಗಿರಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಎಸ್. ಗೊಂಧಳೆ ಮಾತನಾಡಿದರು. ಬೋಧಕರಾದ ಸುಹಾಸಿನಿ ಹಾಗೂ ರೇಷ್ಮಾದೇವಿ, ಲತಾಬಾಯಿ, ಭಗವಂತ, ಭಾಗ್ಯಶ್ರೀ, ಆಶಾ ಎಚ್. ಮಾರ್ಗದರ್ಶನ ನೀಡಿದರು.
ಮೇಳದಲ್ಲಿ ವಿದ್ಯಾರ್ಥಿಗಳು ಸುಮಾರು 60ಕ್ಕೂ ಹೆಚ್ಚಿನ ವಿಜ್ಞಾನ ಮಾದರಿ ತಯಾರಿಸಿ ವಿವರಣೆ ಹಾಗೂ ಉಪಯೋಗದ ಕುರಿತು ಮಾಹಿತಿ ನೀಡಿದರು. ಆದರ್ಶ ವಿದ್ಯಾಲಯದ ಪ್ರಾಚಾರ್ಯ ಎಂ.ಉಮಾಕಾಂತ ಅಧ್ಯಕ್ಷತೆ ವಹಿಸಿದ್ದರು. ಅಶ್ವಿನಿರಾಣಿ ಸ್ವಾಗತಿಸಿದರು, ವಿಮಲಾ ವಂದಿಸಿದರು.