ಅರಸೀಕೆರೆ: ವೈಜ್ಞಾನಿಕ ಯುಗದಲ್ಲಿ ಮನುಷ್ಯ ಬಹಳಷ್ಟು ಪ್ರಗತಿ ಸಾಧಿಸಿದ್ದಾನೆ. ವಿಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಧಾರ್ಮಿಕ ಪ್ರಜ್ಞೆ ಹಾಗೂ ಸ್ವಾಭಿಮಾನ ಕಡಿಮೆಯಾಗುತ್ತಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಆಯೋಜಿಸಿದ್ದ 72ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಧರ್ಮ ಹಾಗೂ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮೌಲ್ಯಗಳು ಬೆಳೆದು ಬಂದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಗೊಳ್ಳಲು ಸಾಧ್ಯ ಎಂದರು.
ಆದರ್ಶ ಸಮಾಜ ನಿರ್ಮಾರ್ಣಕ್ಕೆ ಧರ್ಮದ ನೀತಿ ಸಂಹಿತೆ ಅತ್ಯಂತ ಆಗತ್ಯ. ನೀತಿ ಧರ್ಮಗಳು ನಮ್ಮನ್ನು ಬಂಧಿಸುವುದಿಲ್ಲ. ವೈಚಾರಿಕತೆಯ ದಬ್ಭಾಳಿಕೆ ಧರ್ಮ ಸಂಸ್ಕೃತಿ ಮತ್ತು ಪರಂಪರೆಗಳ ಬಗೆಗೆ ದುಷ್ಪರಿಣಾಮ ಬೀರುತ್ತಿರುವ ಇಂದಿನ ಸಂದರ್ಭದಲ್ಲಿ ಜಾಗೃತ ಗೊಳ್ಳಬೇಕಿದೆ ಎಂದರು.
ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ , ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ಧೇಶ್ವರ ಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಉದ್ಯಮಿ ಅರುಣ್ ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್. ಸಿದ್ದರಾಮಶೆಟ್ಟಿ, ಗಣಪತಿ ಭಕ್ತ ಮಂಡಲಿ ಅಧ್ಯಕ್ಷ ಎಸ್.ಎನ್ ಸುಬ್ಬಣ್ಣ, ಶಾಂತವೀರಯ್ಯ, ಸಿ.ರಾಜಣ್ಣ ಉಪಸ್ಥಿತರಿದ್ದರು.