ಶಿರ್ವ: ಪ್ರಾಥಮಿಕ ಹಾಗೂ ಫ್ರೌಢ ಹಂತದಲ್ಲಿ ಶಿಕ್ಷಕರ ನಡೆನುಡಿ, ಚಾರಿತ್ರ್ಯ ವಿದ್ಯಾರ್ಥಿಗಳ ಮೇಲೆ ಬಹಳಷ್ಟು ಪ್ರಭಾವ ಬೀರಲಿದ್ದು, ಶಿಕ್ಷಕರು ಒಂದು ಮಗುವನ್ನು ಮನುಷ್ಯನಾಗಿ, ಉತ್ತಮ ನಾಗರಿಕನಾಗಿ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ ಎಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಅಭಿಪ್ರಾಯಪಟ್ಟರು.
ಶಿರ್ವ ಸಂತ ಮೇರಿ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಫೆಲಿಕ್ಸ್ ಅಂದ್ರಾದೆ ಮತ್ತು ನಿವೃತ್ತ ಶಿಕ್ಷಕ ರತ್ನಾಕರ ರಾವ್ ಮತ್ತು ಖ್ಯಾತ ರಂಗ ಕಲಾವಿದ ಮಾರ್ವಿನ್ ಅರಾನ್ನಾ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಗಳ ಸಂಚಾಲಕ ಸ್ಟ್ಯಾನಿ ತಾವ್ರೊ ವಹಿಸಿ ಶಾಲಾಭಿವೃದ್ಧಿಯಲ್ಲಿ ಹಳೆವಿದ್ಯಾರ್ಥಿಗಳ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್, ಫ್ರೌಢಶಾಲಾ ಮುಖ್ಯ ಶಿಕ್ಷಕ ದೇವೇಂದ್ರ ನಾಯಕ್ ಇದ್ದರು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸೈಮನ್ ಡಿಸೋಜ ಸ್ವಾಗತಿಸಿದರು. ಡಾ.ಗುರುರಾಜ್, ಆರ್ವಿನ್ ಡಿಸೋಜ ಪರಿಚಯಿಸಿದರು. ಸಮಾರಂಭದಲ್ಲಿ ಜಿ.ಪಂ. ಸದಸ್ಯೆ ಐಡಾಗಿಬ್ಬ ಡಿಸೋಜ, ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ದೀಪಿಕಾ ಶಾಲೆಟ್ ಡಿಸೋಜ, ಹಿರಿಯ ವೈದ್ಯ ಡಾ. ಎನ್.ಎಸ್.ಶೆಟ್ಟಿ ಪಾದೂರು, ಶಿರ್ವ ರೋಟರಿ ಅಧ್ಯಕ್ಷ ಲಿಯೊ ನೊರೋನ್ನಾ ಉಪಸ್ಥಿತರಿದ್ದರು. ನಾರ್ಬರ್ಟ್ ಮಚಾದೊ, ಗಿಲ್ಬರ್ಟ್ ಪಿಂಟೊ ನಿರೂಪಿಸಿದರು. ಸುಜನ್ಯಾ ಎಸ್ ಆಚಾರ್ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಮತಾಯಸ್ ಲೋಬೊ ವಂದಿಸಿದರು.