ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮುಖ್ಯ’

Last Updated 18 ಡಿಸೆಂಬರ್ 2013, 6:27 IST
ಅಕ್ಷರ ಗಾತ್ರ

ಮಂಗಳೂರು: ಶಿಕ್ಷಣದ ಹಕ್ಕು ಕೇವಲ ಅಕ್ಷರ ಅಭ್ಯಾಸ ಕಲಿಸುವ ಶಿಕ್ಷಣಕ್ಕೆ ಮಾತ್ರ ಸೀಮಿತ ಆಗಬಾರದು. ಎಲ್ಲ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯೂ ಆಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪದ ನಿಮಿತ್ತ ಸಹ ನಿರ್ದೇಶಕಿ ಫಿಲೋಮಿನಾ ಲೋಬೊ ಹೇಳಿದರು.

ನಗರದ ನಂತೂರು ಐಎಸ್‌ಡಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಗುಣ ಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಹಕ್ಕು ಕಾಯ್ದೆ– 2009 ಹಾಗೂ ಕರ್ನಾಟಕ ಪ್ರಾಥಮಿಕ ಶಿಕ್ಷಕ ಶಿಕ್ಷಣ ಪಠ್ಯಕ್ರಮ –2012ರ ಆಶಯಗಳು ಮತ್ತು ಅನುಷ್ಠಾನಕ್ಕಿರುವ ಸವಾಲುಗಳು’ ಕುರಿತ ಸಮಾಲೋಚನಾ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯಲ್ಲಿ ಡಿ.ಇಡಿ ಪ್ರಥಮ ವರ್ಷದ ತರಗತಿಯಲ್ಲಿ ಒಟ್ಟು 55 ಹಾಗೂ ದ್ವಿತೀಯ ವರ್ಷದ ತರಗತಿಯಲ್ಲಿ 75 ವಿದ್ಯಾರ್ಥಿಗಳಿದ್ದಾರೆ. ಹಾಗೆಯೇ ರಾಜ್ಯದಲ್ಲಿ ಒಟ್ಟು 750 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳು ಕಡಿಮೆ ಸಂಖ್ಯೆಯಲ್ಲಿದ್ದರೂ,  ಇವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ, ಮುಂದೆ ಉತ್ತಮ ಶಿಕ್ಷಕರನ್ನಾಗಿ ಮಾಡಬಹುದು ಎಂದರು.

ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಣ ಹಕ್ಕು ಕಾಯ್ದೆಯ ಆಶಯದ ಬಗ್ಗೆ ಡಾ. ನಿರಂಜನಾರಾಧ್ಯ ಮಾತನಾಡಿದರು.
ಮೂಲ ಸೌಕರ್ಯ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುವ ಮೂಲಭೂತ ವ್ಯವಸ್ಥೆಯಲ್ಲಿ ಯಾವುದೂ ಸರಿಯಾದ ರೀತಿಯಲ್ಲಿ ಇರುವುದಿಲ್ಲ. 2012–13ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶಾಲೆಗಳಿಗೆ ನೀಡುವ ನೀರಿನ ವ್ಯವಸ್ಥೆಯಲ್ಲಿ ಶೇ 99 ರಷ್ಟು ಶುದ್ಧತೆ ಇರುವುದಿಲ್ಲ ಎಂದು ಕಂಡುಬಂದಿದೆ. ಆದರೆ ನೀರನ್ನು ಒದಗಿಸುವವರು ಶುದ್ಧ ನೀರು ಎಂದು ಹೇಳುತ್ತಾರೆ. ಹೀಗಾದರೆ ಸರಿಯಾದ ಮೂಲಸೌಕರ್ಯ ಸಿಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.

ವೃತ್ತಿ ಪರಿಣತಿ ಇರಲಿ: ಶಿಕ್ಷಣದ ವ್ಯವಸ್ಥೆ ಬದಲಾಗ­ಬೇಕು. ಹಾಗೆಯೇ ಸೇವಾ ಅವಧಿಯ ಶಿಕ್ಷಣ ಆಗಿರಬೇಕು. ಜತೆಗೆ ಶಿಕ್ಷಕರಿಗೆ ನೀಡುವ ಸ್ಥಾನಮಾನ ಸಮಾನವಿರಬೇಕು ಎಂದರು.

ಬಿ.ಎಡ್‌ ಕಲಿತ ವಿದ್ಯಾರ್ಥಿಗಳು ಇರುವಾಗ, ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸುತ್ತಿದ್ದಾರೆ. ಇದು ಖೇದಕರ. ಯಾಕೆಂದರೆ  ಬಿ.ಇಡಿ ವಿದ್ಯಾರ್ಥಿ­ಗಳು ಬೋಧನೆ ಮಾಡುವಲ್ಲಿ ಸಮರ್ಥ­ರಾಗಿ­ರುತ್ತಾರೆ. ಜತೆಗೆ  ಶಿಕ್ಷಣದ ಮಹತ್ವವನ್ನು ಅರಿಯುವಂತೆ ಆಗುತ್ತದೆ ಎಂದು ಹೇಳಿದರು.

ಶಿಕ್ಷಣ ಅಧ್ಯಯನ ಕೇಂದ್ರದ ಡಾ. ಸುಕುಮಾರ ಗೌಡ ‘ಪ್ರಾಥಮಿಕ ಶಿಕ್ಷಕ ಶಿಕ್ಷಣ ಪಠ್ಯಕ್ರಮ-– ಇರಬೇಕಾದ ಆಯಾಮ’ ಕುರಿತು ಮಾತನಾಡಿದರು.

ಹಿರಿಯ ಉಪನ್ಯಾಸಕಿ ಆಶಾ ಎಂ.ಎಸ್‌. ಕರ್ನಾಟಕ ಪ್ರಾಥಮಿಕ ಶಿಕ್ಷಕ ಶಿಕ್ಷಣ ಪಠ್ಯಕ್ರಮ 2012ರ ಪರಿಚಯ ಮತ್ತು ಅನುಷ್ಠಾನಕ್ಕೆ ತೆಗೆದುಕೊಂಡ ಕ್ರಮಗಳ ಕುರಿತು ಮಾತನಾಡಿದರು. ‘ಪಡಿ’ ನಿರ್ದೇಶಕ ರೆನ್ನಿ ಡಿಸೋಜ ಅಧ್ಯಕ್ಷತೆ ವಹಿಸಿ­ದ್ದರು. ಪಡಿ–ವೆಲೊ­ರೆಡ್‌ನ ಜಿಲ್ಲಾ ಸಂಯೋಜಕಿ ಕಸ್ತೂರಿ ಬೋಳಾರ ಸ್ವಾಗತಿಸಿದರು. ತಾಲ್ಲೂಕು ಸಂಯೋಜಕ ದಿನಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT