ನೆಲಮಂಗಲ: ‘ವಿದ್ಯಾರ್ಥಿಗಳಿಗೆ ಇತಿಹಾಸದ ವಿಶೇಷತೆಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ’ ಎಂದು ಕೆಂಪೇಗೌಡ ವೈದ್ಯ ಕಾಲೇಜಿನ ಪ್ರಾಧ್ಯಾಪಕ ಡಾ.ಟಿ.ಎಚ್.ಆಂಜನಪ್ಪ ಹೇಳಿದರು.
ಪಟ್ಟಣದ ವಿಘ್ನೇಶ್ವರ ನಾಗರಿಕ ಕ್ಷೇಮಾಭಿವೃದ್ಧಿ ಸಂಘವು ವಿಶಾಲ್ ಆಂಗ್ಲ ಶಾಲೆಯ ಅವರಣದಲ್ಲಿ ಆಯೊಜಿಸಿದ್ದ ರಾಜ್ಯೋತ್ಸವ ಮತ್ತು ಜನಪದ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃತಿ ಬಿಡುಗಡೆ ಮಾಡಿದ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ‘ಸಾಹಿತ್ಯ ಕೃತಿಗಳು ಅನುಭಾವದ ಪರಿಪಾಕಗಳು. ಕವಿ ದೈಹಿಕವಾಗಿ ನಶ್ವರನಾದರೂ ರಚಿಸಿದ ಪುಸ್ತಕಗಳಿಂದ ಅಮರನಾಗುತ್ತಾನೆ’ ಎಂದರು.
ನಾಗಮಂಗಲ ಆದಿಚುಂಚನಗಿರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಡಿ.ಯೋಗರಾಜು ‘ಸೊನ್ನಲಗೆಯ ಸಿದ್ಧಪುರುಷ’, ‘ಭೋವಿ ಜನಾಂಗ ನಡೆದುಬಂದ ದಾರಿ’, ‘ಗಂಗಾ ಭೋವಿ – ಪ್ರತಿಭಾವಂತ ಸಂಸದೀಯ ಪಟು’ ಕೃತಿಗಳನ್ನು ಪರಿಚಯಿಸಿದರು.
ಬಡಾವಣೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿ.ಎಸ್.ಪರಿಣಿತಾ, ಮಧುಸೂದನ್ ಮತ್ತು ನಗರ ಗ್ರಂಥಾಲಯದ ಪ್ರೇಮಮೂರ್ತಿ ಅವರನ್ನು ಪುರಸಭಾ ಸದಸ್ಯ ಶಿವಕುಮಾರ್ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಬಿ.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ವೀರೇಶ್ ಬಳ್ಳಾರಿ ತಂಡದವರಿಂದ ಜನಪದ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.