ಕೊಪ್ಪಳ: ಪ್ರಕೃತಿ ಅಥವಾ ಮಾನವ ನಿರ್ಮಿತ ವಿಪತ್ತುಗಳ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡಲ್ಲಿ, ತ್ವರಿತ ಹಾಗೂ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲು ಸಾಧ್ಯ ಎಂದು ರಾಜ್ಯ ವಿಕೋಪ ನಿರ್ವಹಣಾ ಯೋಜನೆಯ ಅಧಿಕಾರಿ ಹಾಗೂ ರಾಜ್ಯ ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರ್. ಮನೋಜ್ ಹೇಳಿದರು.
ಜಿಲ್ಲೆಯ ವಿಪತ್ತು ನಿರ್ವಹಣೆ ಯೋಜನೆಯನ್ನು ಸ್ವಯಂಚಾಲನೆಗೊಳಿಸುವ ಸಲುವಾಗಿ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ವಿಕೋಪ ನಿರ್ವಹಣೆಗೆ ಸದ್ಯದ ವ್ಯವಸ್ಥೆ ಬಹಳಷ್ಟು ಹಳೆಯದಾಗಿದೆ. ವಿಕೋಪ ನಿರ್ವಹಣೆಗೆ 2005ರಲ್ಲಿಯೇ ಕಾಯ್ದೆ ಜಾರಿಗೊಳಿಸಲಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳಿಗೂ ಮಹತ್ವದ ಜವಾಬ್ದಾರಿ ಇದೆ. ಎಲ್ಲ ಇಲಾಖೆಗಳು ಕಂಪ್ಯೂಟರೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ, ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ, ವಿಕೋಪ ನಿರ್ವಹಣೆ ಅತ್ಯಂತ ಸುಲಭವಾಗಲಿದೆ ಎಂದರು.
ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಕಂದಾಯ, ಆಹಾರ, ಪೊಲೀಸ್, ಪಂಚಾಯತ್ರಾಜ್ ಸೇರಿದಂತೆ ಎಲ್ಲ ಇಲಾಖೆಗಳಿಗೂ ತಮ್ಮದೇ ಆದ ಜವಾಬ್ದಾರಿ ಇದೆ. ಉದಾಹರಣೆಗೆ ಯಾವುದೋ ಒಂದು ಪ್ರದೇಶ ಪ್ರವಾಹಕ್ಕೆ ಒಳಗಾದಲ್ಲಿ, ಜನರ ರಕ್ಷಣೆಗೆ ಅಗತ್ಯವಿರುವ ಕ್ರಮಗಳು, ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ತರನ್ನು ಸಾಗಿಸುವುದು, ಗಂಜಿ ಕೇಂದ್ರ ಪ್ರಾರಂಭ ಹೀಗೆ ಯಾವುದೇ ನಿರ್ವಹಣಾ ಕಾರ್ಯಗಳಿಗೂ ಸೂಕ್ತ ಸಂಪರ್ಕ ಹಾಗೂ ಮಾಹಿತಿಗಳ ವಿವರ ಹೊಂದಬೇಕಾಗುತ್ತದೆ.
ಕಂಪ್ಯೂಟರೀಕರಣ, ಜಿಪಿಎಸ್ ವ್ಯವಸ್ಥೆ ಹೀಗೆ ತಂತ್ರಜ್ಞಾನ ಬಳಕೆಯಿಂದ ಕೆಲವೇ ಸೆಕೆಂಡುಗಳಲ್ಲಿ ಎಲ್ಲ ಮಾಹಿತಿ ಪಡೆದು, ನಿರ್ವಹಣಾ ಕಾರ್ಯ ಕೈಗೊಳ್ಳಲು ಸಮಯದ ಉಳಿತಾಯ ಹಾಗೂ ಹೆಚ್ಚಿನ ಅನಾಹುತ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಈಗಾಗಲೆ ಇಂತಹ ವ್ಯವಸ್ಥೆಯನ್ನು ರಾಯಚೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿ, ಅಲ್ಲಿ ಯಶಸ್ಸು ಪಡೆಯಲಾಗಿದೆ.
ಇದೀಗ ಎರಡನೆ ಹಂತದಲ್ಲಿ ರಾಜ್ಯದ ಕೊಪ್ಪಳ, ಕೊಡಗು, ಬಾಗಲಕೋಟೆ, ಧಾರವಾಡ, ಬಿಜಾಪುರ ಮತ್ತು ಚಿಕ್ಕಮಗಳೂರು ಸೇರಿ ಒಟ್ಟು 6 ಜಿಲ್ಲೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಬೆಂಗಳೂರಿನ ವಿಜ್ಹಾರ್ಡ್ ಟೆಕ್ನಾಲಜಿ ಸಂಸ್ಥೆಯವರು ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ನೀಡಿದ್ದು, ಹಂತ ಹಂತವಾಗಿ ತಂತ್ರಾಂಶವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಹ ಉದ್ದೇಶಿಸಲಾಗಿದೆ. ಈ ವರ್ಷ ಡಿಸೆಂಬರ್ ಮಾಸಾಂತ್ಯದ ವೇಳೆಗೆ ಈ 6 ಜಿಲ್ಲೆಗಳಲ್ಲೂ ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆ ಸಿದ್ಧವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಸಹಾಯಕ ಆಯುಕ್ತ ಮಂಜುನಾಥ್, ಆಡಳಿತ ತರಬೇತಿ ಅಧಿಕಾರಿ ಜಿ.ವಿಶ್ವನಾಥ್, ವಿಜ್ಹಾರ್ಡ್ ಟೆಕ್ನಾಲಜಿ ಸಂಸ್ಥೆಯ ಸುಮೀಂದ್ರನಾಥ್, ಆರ್.ಧರ್ಮರಾಜು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.