ನವದೆಹಲಿ(ಐಎಎನ್ಎಸ್): ವಿರೋಧಿಗಳ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಕೀಳಾಗಿ ಕಾಣುವುದಿಲ್ಲ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಶುಕ್ರವಾರ ಇಲ್ಲಿ ನಡೆದ ಸಂವಾದದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಕಿದ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ವಿರೋಧಿಗಳನ್ನು ಗಂಭೀರವಾಗಿ ಪರಿಗಣಿಸುವವರಲ್ಲಿ ನಾನೂ ಒಬ್ಬ. ಇಲ್ಲಿ ಅತೃಪ್ತಿಗೆ ಯಾವುದೇ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯನ್ನು ಆತ್ಮಸ್ಥೈರ್ಯದಿಂದ ಎದುರಿಸಲಿದೆ. ಚುನಾವಣಾ ಮುಗಿಯುವುದರೊಂದಿಗೆ ಎಲ್ಲವೂ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ. ಮತ ಬೇಟೆಯ ಗಿಮಿಕ್ ಅಲ್ಲ: ಪ್ರಸ್ತಾವಿತ ಕೋಮು ಹಿಂಸಾಚಾರ ತಡೆ ಮಸೂದೆ-ಯು ಚುನಾವಣೆಯಲ್ಲಿ ‘ಮತಗಳಿಸುವ ಗಿಮಿಕ್’ ಎಂಬ ಕಾಂಗ್ರೆಸ್ಸೇತರ ಪಕ್ಷಗಳ ಆರೋಪಗಳನ್ನು ಮನಮೋಹನ್ ಸಿಂಗ್ ತಳ್ಳಿ ಹಾಕಿದ್ದಾರೆ.
ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ ನಡೆದಂತಹ ಸಮಾಜದ ಶಾಂತಿ ಭಂಗ ಮಾಡುವ ಹಿಂಸಾಚಾರಗಳನ್ನು ನಿಯಂತ್ರಿಸಲು ಈಗ ಸಮಯ ಬಂದಿದೆ ಎಂದು ಹೇಳಿದ್ದಾರೆ.