ಜೈಪುರ (ಪಿಟಿಐ): ‘ಸಚಿನ್ ತೆಂಡೂಲ್ಕರ್ ಶ್ರೇಷ್ಠ ಆಟಗಾರ. ಆದರೆ ಅವರು ಆಡುತ್ತಿದ್ದಾರೆ ಎಂಬ ಕಾರಣ ಚಾಂಪಿಯನ್ಸ್ ಲೀಗ್ ಟೂರ್ನಿಯ ನಮ್ಮ ಮೊದಲ ಪಂದ್ಯಕ್ಕೆ ವಿಶೇಷ ಮಹತ್ವ ನೀಡಬೇಕಿಲ್ಲ’ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಸೆಪ್ಟೆಂಬರ್ 21 ರಂದು ನಡೆಯಲಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ದ್ರಾವಿಡ್ ನೇತೃತ್ವದ ರಾಜಸ್ತಾನ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎದುರಾಗಲಿವೆ. ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಸಚಿನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
‘ಈ ಹಿಂದೆಯೂ ನಾವು ಪರಸ್ಪರ ಎದುರಾಳಿಗಳಾಗಿ ಆಡಿದ್ದೇವೆ. ಆದರೆ ಈ ಪಂದ್ಯಕ್ಕೆ ಯಾವುದೇ ವಿಶೇಷ ಸ್ಥಾನವಿಲ್ಲ ಎಂಬುದು ನನ್ನ ಅನಿಸಿಕೆ. ಮುಂಬೈ ತಂಡ ಸಚಿನ್ ಅವರನ್ನು ಹೊಂದಿರುವುದು ನಮಗೆ ಒಂದು ಸವಾಲು ನಿಜ. ಆದರೆ ಈ ಪಂದ್ಯವನ್ನು ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಎಂದು ಪರಿಗಣಿಸಿದರೆ ಸಾಕು’ ಎಂದು ದ್ರಾವಿಡ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದು ನಿಮ್ಮ ಕೊನೆಯಅ ಟೂರ್ನಿಯೇ ಎಂಬ ಪ್ರಶ್ನೆ ಎದುರಾ ದಾಗ ಕರ್ನಾಟಕದ ಬ್ಯಾಟ್ಸ್ಮನ್, ‘ಮುಂದಿನ ವರ್ಷ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತಿಸಿಲ್ಲ. ಈ ಟೂರ್ನಿಯ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು ನನ್ನ ಉದ್ದೇಶ’ ಎಂದು ಪ್ರತಿಕ್ರಿಯಿಸಿದರು.
ಎಸ್. ಶ್ರೀಶಾಂತ್ ಒಳಗೊಂಡಂತೆ ರಾಯಲ್ಸ್ ತಂಡದ ಕೆಲವು ಆಟಗಾರರು ಸ್ಪಾಟ್ ಫಿಕ್ಸಿಂಗ್ನಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಬಗ್ಗೆ ಪ್ರಶ್ನೆ ಎದುರಾದಾಗ ದ್ರಾವಿಡ್, ‘ಅದು ತನಿಖಾ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯ. ಆ ಕುರಿತು ನಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಉತ್ತರಿಸಿದರು.