ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಕರ್ಮ ಸಮಾಜ ಅಭಿವೃದ್ಧಿಗೆ ಆದ್ಯತೆ ನೀಡಿ’

Last Updated 20 ಡಿಸೆಂಬರ್ 2013, 10:04 IST
ಅಕ್ಷರ ಗಾತ್ರ

ಸುರಪುರ: ‘ವಿಶ್ವಕರ್ಮರಿಂದ ಕಲೆ ವಿಶ್ವವ್ಯಾಪ್ತಿಯಾಗಲು ಸಾಧ್ಯವಾಗಿದೆ. ಕಲ್ಲಿನಲ್ಲಿ ಚಿತ್ತಾರ ಬಿಡಿಸುವ ಶಿಲ್ಪಿಗಳ ಬದುಕು ಶೋಚನಿಯ ಸ್ಥಿತಿಯಲ್ಲಿದೆ. ವಿಶ್ವಕರ್ಮರ ಅಭಿವೃದ್ಧಿಗೆ ಸರ್ಕಾರ ಆದ್ಯ ಗಮನ ಹರಿಸಬೇಕು’ ಎಂದು ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧೀಶರಾದ ಗುರುನಾಥೇಂದ್ರ ಮಹಾಸ್ವಾಮಿ ಹೇಳಿದರು.

ಪಟ್ಟಣದ ಕಾಳಿಕಾದೇವಿ ಮಂದಿರ­ದಲ್ಲಿ ಮಂಗಳವಾರ ವಿಶ್ವಕರ್ಮ ವಿಕಾಸ ಸಂಘ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲ್ಲೂಕು ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ ಮೌನೇಶ್ವರರ 7ನೇ ವರ್ಷದ ತೊಟ್ಟಿಲೋತ್ಸವ ಕಾರ್ಯ­ಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾಜಿ ಸಂಸದ ರಾಜಾ ರಂಗಪ್ಪ­ನಾಯಕ ಉದ್ಘಾಟಿಸಿ ಮಾತನಾಡಿ, ‘ಬಡಿಗೇರ ಬಾವಿ ಹತ್ತಿರದ ವಿಶ್ವಕರ್ಮ ಸಮಾಜಕ್ಕೆ ಸೇರಿದ ನಿವೇಶನದಲ್ಲಿ ವಿಶ್ವಕರ್ಮ ಕಲ್ಯಾಣ ಮಂಟಪ ನಿರ್ಮಾಣಕ್ಕೆ ನನ್ನ ಸಹೋದರ ಶಾಸಕ ರಾಜಾ ವೆಂಕಟಪ್ಪ­ನಾಯಕ ನೆರವಿನ ಭರವಸೆ ನೀಡಿದ್ದಾರೆ’ ಎಂದರು.

‘ನಮ್ಮಲ್ಲಿ ಯಾವುದೇ ಜಾತಿ ಧರ್ಮಗಳ ಭೇದಭಾವವಿಲ್ಲ. ನಾವು ಕಾಣುವುದು ಎರಡೇ ಜಾತಿ ನಮ್ಮೊಂದಿ­ಗಿರುವವರು ಒಂದು ಜಾತಿ. ವಿರೋಧಿ­ಗಳದು ಇನ್ನೊಂದು ಜಾತಿ’ ಎಂದು ಹಾಸ್ಯ ಚಟಾಕೆ ಹಾರಿಸಿದರು. ನಮ್ಮ ಅಧಿಕಾರವಧಿಯಲ್ಲಿ ಎಲ್ಲ ಜಾತಿ ಜನಾಂಗ­ದವರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡಿರುವುದಾಗಿ ಹೇಳಿದರು.

ಎಲ್ಲ ಜಾತಿ ಜನಾಂಗವನ್ನು ಒಂದೇ ದೃಷ್ಟಿಯಿಂದ ಕಾಣುವುದು ನಮ್ಮ ಸಂಸ್ಕೃತಿಯಾಗಿದೆ. ಎಲ್ಲ ಜಾತಿ ಜನಾಂಗದವರಿಗೆ ಆದ್ಯತೆ ಮೇರೆಗೆ ಶಾದಿಮಹಲ್, ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಿಸಿಕೊಡ­ಲಾಗುವುದು ಎಂದರು.

ಶಹಪುರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತ­ನಾಡಿ, ಚಿನ್ನ, ಬೆಳ್ಳಿ ಆಭರಣ ತಯಾರಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಗಟ್ಟಬೇಕು. ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಗೆ ರಜೆ ಘೋಷಿಸಿ ಸರ್ಕಾರವೇ ಜಯಂತಿಯನ್ನು ಆಚರಿಸಬೇಕು. ಪ್ರಾಧಿ­ಕಾರದ ರಚನೆಯಲ್ಲಿ ವಿಶ್ವಕರ್ಮರನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸೂರ್ಯನಾರಾಯಣ ಸ್ವಾಮೀಜಿ ಮಾತನಾಡಿ, ರಾಜಕೀಯದಲ್ಲಿ ವಿಶ್ವಕರ್ಮ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು. ಪಂಚಕಸುಬುಗಳ ರಕ್ಷಣೆ­ಗಾಗಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪಿತವಾಗಬೇಕು. ಕಸುಬುಗಳ ಆಧಾರ­ದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು. ಕಸುಬುಗಳ ಅಭಿವೃದ್ಧಿ ನಿಗಮಕ್ಕೆ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಅಖಿಲ ಕರ್ನಾಟಕ ವಿಶ್ವ­ಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಐ.ಸಿ.ಪಂಚಾಳ, ಉತ್ತರ ಕರ್ನಾಟಕ ವಿಭಾಗದ ಸಂಚಾಲಕ ವಿರೇಂದ್ರ ಇನಾಂದಾರ್, ದೇವರ­ಗೋನಾಲದ ಮೌನೇಶ್ವರ ದೇವಸ್ಥಾನ ಅರ್ಚಕ ನಿಂಗಯ್ಯ ಮುತ್ಯಾ, ಬಸವ­ರಾಜ ನಾಯ್ಕಲ್, ಕೆ. ವೀರಪ್ಪ ಇದ್ದರು.

ದೇವಿಂದ್ರಪ್ಪ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ಕಾಳಪ್ಪ ಶಾಬಾದಿ ಸ್ವಾಗತಿಸಿದರು. ಮಹೇಶ ಕುಂಟೋಜಿ ನಿರೂಪಿಸಿದರು. ಮನೋಹರ ಕುಂಟೋಜಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT