ಸುರಪುರ: ‘ವಿಶ್ವಕರ್ಮರಿಂದ ಕಲೆ ವಿಶ್ವವ್ಯಾಪ್ತಿಯಾಗಲು ಸಾಧ್ಯವಾಗಿದೆ. ಕಲ್ಲಿನಲ್ಲಿ ಚಿತ್ತಾರ ಬಿಡಿಸುವ ಶಿಲ್ಪಿಗಳ ಬದುಕು ಶೋಚನಿಯ ಸ್ಥಿತಿಯಲ್ಲಿದೆ. ವಿಶ್ವಕರ್ಮರ ಅಭಿವೃದ್ಧಿಗೆ ಸರ್ಕಾರ ಆದ್ಯ ಗಮನ ಹರಿಸಬೇಕು’ ಎಂದು ಆನೆಗುಂದಿ ಸಂಸ್ಥಾನದ ಸರಸ್ವತಿ ಪೀಠಾಧೀಶರಾದ ಗುರುನಾಥೇಂದ್ರ ಮಹಾಸ್ವಾಮಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಮಂಗಳವಾರ ವಿಶ್ವಕರ್ಮ ವಿಕಾಸ ಸಂಘ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲ್ಲೂಕು ಘಟಕ ಸಂಯುಕ್ತವಾಗಿ ಏರ್ಪಡಿಸಿದ್ದ ಮೌನೇಶ್ವರರ 7ನೇ ವರ್ಷದ ತೊಟ್ಟಿಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಾಜಿ ಸಂಸದ ರಾಜಾ ರಂಗಪ್ಪನಾಯಕ ಉದ್ಘಾಟಿಸಿ ಮಾತನಾಡಿ, ‘ಬಡಿಗೇರ ಬಾವಿ ಹತ್ತಿರದ ವಿಶ್ವಕರ್ಮ ಸಮಾಜಕ್ಕೆ ಸೇರಿದ ನಿವೇಶನದಲ್ಲಿ ವಿಶ್ವಕರ್ಮ ಕಲ್ಯಾಣ ಮಂಟಪ ನಿರ್ಮಾಣಕ್ಕೆ ನನ್ನ ಸಹೋದರ ಶಾಸಕ ರಾಜಾ ವೆಂಕಟಪ್ಪನಾಯಕ ನೆರವಿನ ಭರವಸೆ ನೀಡಿದ್ದಾರೆ’ ಎಂದರು.
‘ನಮ್ಮಲ್ಲಿ ಯಾವುದೇ ಜಾತಿ ಧರ್ಮಗಳ ಭೇದಭಾವವಿಲ್ಲ. ನಾವು ಕಾಣುವುದು ಎರಡೇ ಜಾತಿ ನಮ್ಮೊಂದಿಗಿರುವವರು ಒಂದು ಜಾತಿ. ವಿರೋಧಿಗಳದು ಇನ್ನೊಂದು ಜಾತಿ’ ಎಂದು ಹಾಸ್ಯ ಚಟಾಕೆ ಹಾರಿಸಿದರು. ನಮ್ಮ ಅಧಿಕಾರವಧಿಯಲ್ಲಿ ಎಲ್ಲ ಜಾತಿ ಜನಾಂಗದವರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡಿರುವುದಾಗಿ ಹೇಳಿದರು.
ಎಲ್ಲ ಜಾತಿ ಜನಾಂಗವನ್ನು ಒಂದೇ ದೃಷ್ಟಿಯಿಂದ ಕಾಣುವುದು ನಮ್ಮ ಸಂಸ್ಕೃತಿಯಾಗಿದೆ. ಎಲ್ಲ ಜಾತಿ ಜನಾಂಗದವರಿಗೆ ಆದ್ಯತೆ ಮೇರೆಗೆ ಶಾದಿಮಹಲ್, ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಿಸಿಕೊಡಲಾಗುವುದು ಎಂದರು.
ಶಹಪುರದ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಚಿನ್ನ, ಬೆಳ್ಳಿ ಆಭರಣ ತಯಾರಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಗಟ್ಟಬೇಕು. ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿಗೆ ರಜೆ ಘೋಷಿಸಿ ಸರ್ಕಾರವೇ ಜಯಂತಿಯನ್ನು ಆಚರಿಸಬೇಕು. ಪ್ರಾಧಿಕಾರದ ರಚನೆಯಲ್ಲಿ ವಿಶ್ವಕರ್ಮರನ್ನು ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸೂರ್ಯನಾರಾಯಣ ಸ್ವಾಮೀಜಿ ಮಾತನಾಡಿ, ರಾಜಕೀಯದಲ್ಲಿ ವಿಶ್ವಕರ್ಮ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕು. ಪಂಚಕಸುಬುಗಳ ರಕ್ಷಣೆಗಾಗಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪಿತವಾಗಬೇಕು. ಕಸುಬುಗಳ ಆಧಾರದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಬೇಕು. ಕಸುಬುಗಳ ಅಭಿವೃದ್ಧಿ ನಿಗಮಕ್ಕೆ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಐ.ಸಿ.ಪಂಚಾಳ, ಉತ್ತರ ಕರ್ನಾಟಕ ವಿಭಾಗದ ಸಂಚಾಲಕ ವಿರೇಂದ್ರ ಇನಾಂದಾರ್, ದೇವರಗೋನಾಲದ ಮೌನೇಶ್ವರ ದೇವಸ್ಥಾನ ಅರ್ಚಕ ನಿಂಗಯ್ಯ ಮುತ್ಯಾ, ಬಸವರಾಜ ನಾಯ್ಕಲ್, ಕೆ. ವೀರಪ್ಪ ಇದ್ದರು.
ದೇವಿಂದ್ರಪ್ಪ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು. ಕಾಳಪ್ಪ ಶಾಬಾದಿ ಸ್ವಾಗತಿಸಿದರು. ಮಹೇಶ ಕುಂಟೋಜಿ ನಿರೂಪಿಸಿದರು. ಮನೋಹರ ಕುಂಟೋಜಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.