ಕೋಲಾರ: ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವವರು ಕಡ್ಡಾಯವಾಗಿ ಅಲ್ಲಿನ ದೇಸಿ ಔಷಧಿ– ಚಿಕಿತ್ಸಾ ಪದ್ಧತಿಗಳನ್ನೂ ಕಲಿಯುವ ವ್ಯವಸ್ಥೆ ಇದೆ. ಪಠ್ಯಕ್ರಮದಲ್ಲೇ ಅದನ್ನು ಅಳವಡಿಸಲಾಗಿದೆ.
ಎಂಬಿಬಿಎಸ್ ಬದಲಿಗೆ ಸಮಗ್ರ ಆರೋಗ್ಯ ಚಿಕಿತ್ಸೆಯನ್ನು ಕೇಂದ್ರೀಕರಿಸಿದ ಸಮನ್ವಯ ಕಲಿಕಾ ವ್ಯವಸ್ಥೆಯು ಭಾರತದಲ್ಲೂ ಜಾರಿಗೆ ಬರಬೇಕಾಗಿದೆ ಎಂದು ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಯೋಗ ವಿಭಾಗದ ಮಾಜಿ ಡೀನ್ ಡಾ.ಆರ್.ನಾಗರತ್ನ ಪ್ರತಿಪಾದಿಸಿದರು.
ನಗರ ಹೊರವಲಯದ ದೇವರಾಜ ಅರಸು ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರದಿಂದ ಆರಂಭವಾದ ಪರ್ಯಾಯ ಔಷಧಗಳ ಕುರಿತ ಎರಡು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯಕ್ರಮದಲ್ಲೇ ದೇಸಿ ಚಿಕಿತ್ಸಾ ಪದ್ಧತಿ ಕಲಿಕೆಯನ್ನು ಅಳವಡಿಸಿರುವುದರಿಂದ ಚೀನಾದಲ್ಲಿ ವೈದ್ಯ ಪದವಿ ಪಡೆಯುವ ಪ್ರತಿಯೊಬ್ಬರಿಗೂ ಪರ್ಯಾಯ ಚಿಕಿತ್ಸಾ ಕ್ರಮಗಳ ಅರಿವು ಇದ್ದೇ ಇರುತ್ತದೆ. ತುರ್ತು ಸಂದರ್ಭದಲ್ಲಿ ಈ ಅರಿವು ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎಂದರು.
ಇಂಥ ಸಮನ್ವಯ ವೈದ್ಯಕೀಯ ಚಿಕಿತ್ಸೆ ಕುರಿತು ದೇಶದಲ್ಲಿ ಇನ್ನೂ ಚರ್ಚೆ ಮಾತ್ರ ನಡೆಯುತ್ತಿದೆ. ಆದರೆ ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಹಲವು ಬಗೆಯ ಚಿಕಿತ್ಸೆಗಳನ್ನು ಕಲಿಸುವ ಮತ್ತು ಪ್ರಯೋಗ ಮಾಡುವ ಕೆಲಸ ಶುರುವಾಗಿ ಹಲವು ವರ್ಷಗಳೇ ಆಗಿವೆ ಎಂದರು.
ಭಾರತದಲ್ಲಿ ಆಲೋಪಥಿ, ಹೋಮಿಯೋಪಥಿ, ಸಿದ್ಧ, ಯುನಾನಿ, ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಸೇರಿದಂತೆ ವಿವಿಧ ಚಿಕಿತ್ಸಾ ಕ್ರಮಗಳು ಪರಸ್ಪರ ಅರ್ಥ ಮಾಡಿಕೊಂಡಿಲ್ಲ. ಹೀಗಾಗಿಯೇ ವಿವಿಧ ಬಗೆಯ ಔಷಧಿ ಮತ್ತು ಚಿಕಿತ್ಸೆಯನ್ನು ಸಮನ್ವಯ ವಿಧಾನದಲ್ಲಿ ಬಳಸುವ ಕುರಿತು ಕಾರ್ಯಕ್ರಮಗಳು ನಾಲ್ಕು ದಶಕದಿಂದ ನಡೆಯುತ್ತಲೇ ಇದ್ದರೂ ಪ್ರಯೋಜನವೇ ಆಗಿಲ್ಲ ಎಂದು ವಿಷಾದಿಸಿದರು.
ಸಮನ್ವಯ ಚಿಕಿತ್ಸಾ ಪದ್ಧತಿ ದೇಶದಲ್ಲಿ ಅಸ್ತಿತ್ವಕ್ಕೆ ಬರುವುದು ಯಾವಾಗ ಎಂದು ಪ್ರಶ್ನಿಸಿದ ಅವರು, ವೈದ್ಯಕೀಯ ಸಂಶೋಧನಾ ಕ್ಷೇತ್ರದಲ್ಲೂ ಇದೇ ಸನ್ನಿವೇಶವಿದೆ. ಪ್ರಭಾವ ಮತ್ತು ಪರಿಣಾಮಗಳ ದೃಷ್ಟಿಯಿಂದ ಚಿಕಿತ್ಸಾ ಪದ್ಧತಿಗಳನ್ನು ತೌಲನಿಕ ನೆಲೆಯಲ್ಲಿ ಅಧ್ಯಯನ ಮಾಡುವ ಪ್ರಯತ್ನಗಳು ಸರಿಯಾದ ರೀತಿ ನಡೆಯುತ್ತಿಲ್ಲ. ಅಧ್ಯಯನ ಮತ್ತು ಸಂಶೋಧನಾ ಶಿಸ್ತಿನೊಳಗೆ ಇದು ಮೂಡಿಬರಬೇಕಾಗಿದೆ. ನೀತಿಗಳನ್ನು ರೂಪಿಸುವ ಸರ್ಕಾರಗಳೂ ಈ ಕಡೆಗೆ ಗಂಭೀರ ಗಮನ ಹರಿಸಬೇಕಾಗಿದೆ ಎಂದರು.
ಆಧುನಿಕ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪಶ್ಚಿಮದ ದೇಶಗಳ ಸಾಧನೆಗೆ ಹೋಲಿಸಿದರೆ 30 ವರ್ಷಗಳಷ್ಟು ಹಿಂದೆಯೇ ಉಳಿದಿದ್ದ ಭಾರತ ಈಗ ಸಾಕಷ್ಟು ಸಾಧನೆ ಮಾಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಪಶ್ಚಿಮ ದೇಶಗಳು ಕೊಟ್ಟಿದ್ದನ್ನೇ ಪಾಲಿಸುತ್ತಿರುವ ದೇಶವು ಇನ್ನು ಮುಂದಾದರೂ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಚಿಕಿತ್ಸಾ ಕ್ರಮಗಳ ಕುರಿತು ಆ ದೇಶಗಳಿಗೆ ಕಲಿಸಿಕೊಡಬೇಕಾಗಿದೆ. ಅದಕ್ಕೆ ಈಗ ಕಾಲವೂ ಕೂಡಿ ಬಂದಿದೆ ಎಂಬುದನ್ನು ಗಮನಿಸಬೇಕಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ದೇವರಾಜ ಅರಸು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎ
ಫ್.ಕೊಟೂರ್, ಅರಿವಳಿಕೆ ಚಿಕಿತ್ಸೆಯು ಆಲೋಪಥಿಯ ಒಂದು ವಿಧಾನ. ಆದರೆ ಬನಾರಸ್ ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ವಿಭಾಗದಲ್ಲಿ ಅರಿವಳಿಕೆ ಕುರಿತ ಎಂಡಿ ಪದವಿ ಕೋರ್ಸ್ ಇರುವುದು ವಿಪರ್ಯಾಸ. ಆಲೋಪಥಿಯಲ್ಲಿ ಈ ವಿಷಯವನ್ನು ಅಧ್ಯಯನ ಮಾಡಿದ ಪದವೀಧರರು ಸಾವಿರಾರು ರೂಪಾಯಿ ಶುಲ್ಕ ವಿಧಿಸುತ್ತಿರುವ ವೇಳೆಯಲ್ಲಿಯೇ ಆಯುರ್ವೇದದಲ್ಲಿ ಅರಿವಳಿಕೆ ಚಿಕಿತ್ಸೆಯನ್ನು ಅಧ್ಯಯನ ಮಾಡಿದವರು ರೋಗಿ ಆರೈಕೆಯ ಅವಕಾಶಗಳಿಗಾಗಿ ಬನಾರಸ್ ಪ್ರದೇಶದ ಬೀದಿಗಳನ್ನು ಸುತ್ತುತ್ತಿದ್ದಾರೆ. ಅಪ್ರಾಯೋಗಿಕವಾಗಿರುವ ಕೋರ್ಸ್ ಓದಿದ ಫಲ ಇದು ಎಂದು ವಿಷಾದಿಸಿದರು.
ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನನ್ನ ಸಂಬಂಧಿಯೊಬ್ಬರ ಆರೋಗ್ಯ ವಿಚಾರಿಸಲು ಬಂದ ಅಲ್ಲಿನ ನಿವಾಸಿ ವೈದ್ಯರು ಆಯುರ್ವೇದ ಪದವೀಧರರಾಗಿದ್ದರು.
ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗೂ ಆಯುರ್ವೇದವನ್ನು ಕಲಿತವರಿಗೂ ಎಲ್ಲಿನ ಸಂಬಂಧ? ಇಂಥ ವಿಪರ್ಯಾಸದ ಸನ್ನಿವೇಶಗಳು ಬದಲಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಕೊಯಮತ್ತೂರಿನ ಎವಿಪಿ ಸಂಶೋಧನಾ ಫೌಂಡೇಷನ್ ನಿರ್ದೇಶಕ ಡಾ.ಪಿ.ರಾಮಮನೋಹರ್, ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಿ.ಎನ್.ಶ್ರೀರಾಮುಲು, ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಕುಲಸಚಿವ ಡಾ.ಎವಿಎಂ ಕುಟ್ಟಿ, ಸಂಕಿರಣದ ಸಂಘಟನಾ ಅಧ್ಯಕ್ಷ ಡಾ.ಸಿ.ಮುನಿನಾರಾಯಣ, ಸಂಚಾಲಕ ಡಾ.ಎನ್.ಎಸ್.ಅನಿಲ್ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.