ಉಳ್ಳಾಲ: ವೈದ್ಯರು ಎರಡು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದಾಗ ಬಡವರ ಕಷ್ಟಗಳನ್ನು ಅರಿಯಲು ಸಾಧ್ಯ, ಅವರ ಸೇವೆ ಮಾಡುವುದರೊಂದಿಗೆ ವೃತ್ತಿ ಜೀವನದಲ್ಲಿಯೂ ಯಶಸ್ಸು ಗಳಿಸಲು ಸಾಧ್ಯ ಎಂದು ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ 14ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.
ಸಮಾಜ ವೈದ್ಯರನ್ನು ಉನ್ನತ ಸ್ಥಾನದಲ್ಲಿ ಕಾಣುತ್ತಿದೆ. ಹಾಗಾಗಿ ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಕೆಲವು ವರ್ಷವಾದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕು. ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ 50ಶೇ. ವೈದ್ಯಕೀಯ ವಿದ್ಯಾರ್ಥಿಗಳು, ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ತಪಾಸಣೆಗೆ ಬರುತ್ತಿರುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪೈಕಿ 50ರಿಂದ 60ಶೇ. ರೋಗಿಗಳು ಕೇರಳ ರಾಜ್ಯದವರೇ ಆಗಿದ್ದಾರೆ. ನೆರೆಯ ರಾಜ್ಯದ ಜೊತೆಗೆ ಸಂಸ್ಥೆ ಹಿಂದಿನಿಂದಲೂ ಉತ್ತಮ ಸಂಬಂಧವಿಟ್ಟುಕೊಂಡಿದ್ದು ಹಲವು ವರ್ಷಗಳಿಂದ ಸಂಸ್ಥೆ ‘ಎ’ ದರ್ಜೆಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜು ಸ್ಮರಣ ಸಂಚಿಕೆಯನ್ನು ವಿದ್ಯಾರ್ಥಿ ಸಂಪಾದಕಿ ಸಾಕಿನ್ಯ ಹೆಗ್ಡೆ, ಸಂಪಾದಕೀಯ ಸಮಿತಿ ಸಿಬ್ಬಂದಿ ಸಲಹೆಗಾರ್ತಿ ಡಾ.ಶೋಭಾ ಶೆಟ್ಟಿ ಹಾಗೂ ಗ್ರಾಮ ಕ್ಷೇಮ ಹೆಲ್ತ್ ಕಾರ್ಡ್ನ್ನು ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ಬಿಡುಗಡೆಗೊಳಿಸಿದರು.
ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ನಾಲ್ಕು ಮಂದಿ ಹಿರಿಯ ವೈದ್ಯರಾದ ಫಿಸಿಯೋಲಾಜಿ ಪ್ರೊಫೆಸರ್ ಡಾ.ವಿ. ಜಯದೇವಿ ಮಾಥೂರ್, ಬಯೋಕೆಮೆಸ್ಟ್ರಿ ಪ್ರೊಫೆಸರ್ ಡಾ. ಸುಂದರ ದೇವಿ, ಅನಾಟೆಮಿ ಪ್ರೊಫೆಸರ್ ಡಾ.ರಾಜರಾಜೇಶ್ವರಿ ಹಾಗೂ ಫೊರೆನ್ಸಿಕ್ ಮೆಡಿಸಿನ್ನ ಪ್ರೊಫೆಸರ್ ಡಾ. ಲಕ್ಷ್ಮಣ ಪೈ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಕುರಿತು ಕ್ಷೇಮ ವೈಸ್ ಡೀನ್ ಡಾ.ಅಮೃತ್ ಎಂ. ಮಿರಾಜ್ಕರ್, ಬಯೋಕೆಮೆಸ್ಟಿ ್ರ ವಿಭಾಗ ಮುಖ್ಯಸ್ಥೆ ಡಾ.ಸುಕನ್ಯ ಶೆಟ್ಟಿ, ಪಿಡಿಯಾಟ್ರಿಕ್ಸ್ ವಿಭಾಗ ಮುಖ್ಯಸ್ಥೆ ಡಾ.ವಿಜಯ ಶೆಣೈ ಹಾಗೂ ಫೊರೆನ್ಸಿಕ್ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ.ಮಹಾಬಲ ಶೆಟ್ಟಿ ಸನ್ಮಾನಿತರ ಕುರಿತು ವಾಚಿಸಿದರು.
ಸಾಧನೆಗೈದವರ ಪಟ್ಟಿಯನ್ನು ಕ್ಷೇಮ ಕುಲಸಚಿವ ಪ್ರೊ. ಜಯಪ್ರಕಾಶ್ ಶೆಟ್ಟಿ ವಾಚಿಸಿದರು.
ಸಹ ಕುಲಾಧಿಪತಿ ಪ್ರೊ.ಎಂ.ಶಾಂತಾರಾಮ್ ಶೆಟ್ಟಿ ಸನ್ಮಾನಿತರು ಸಂಸ್ಥೆಗೆ ಸಲ್ಲಿಸಿದ ಸೇವೆಯ ಗುಣಗಾನ ಮಾಡಿದರು. ಕುಲಪತಿ ಡಾ.ಎಸ್.ರಮಾನಂದ ಶೆಟ್ಟಿ ಪಾ್ರಸ್ತಾವಿಕವಾಗಿ ಮಾತನಾಡಿದರು.
ಕ್ಷೇಮ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಕ್ಷೇಮ ವೈಸ್ ಡೀನ್ ಡಾ.ಅಮೃತ್ ಎಂ. ಮಿರಾಜ್ಕರ್ ವಾರ್ಷಿಕ ವರದಿ ಮಂಡಿಸಿದರು. ಅನೂಪ ಆ್ಯನ್ ಪೆರುಮಾಳ್ ಹಾಗೂ ಕ್ರಿಸ್ಟಿನ್ ಎ.ಥೋಮಸ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.