ಶ್ರೀನಿವಾಸಪುರ: ವಿದ್ಯಾರ್ಥಿಗಳು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು. ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳ ಬಳಕೆಗೆ ನೀಡುವ ಸೈಕಲ್ ಶಾಲೆಗೆ ಬರಲು ಮಾತ್ರ ಬಳಕೆಯಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ ಸಲಹೆ ನೀಡಿದರು.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಸುಗಟೂರು ಗ್ರಾಮದ ಸಬರಮತಿ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದರು.
ಸರ್ಕಾರ ಬಸ್ ಪಾಸ್, ವಿದ್ಯಾರ್ಥಿ ನಿಲಯದಲ್ಲಿ ವಾಸ ಇತ್ಯಾದಿಗಳನ್ನು ಪರಿಗಣಿಸದೆ ಎಂಟನೇ ತರಗತಿಗೆ ಸೇರುವ ಎಲ್ಲ ವಿದ್ಯಾರ್ಥಿಗಳಿಗೂ ಸೈಕಲ್ ನೀಡಬೇಕು. ಹಾಗೆ ಮಾಡಿದಲ್ಲಿ ಆಸೆಗಣ್ಣಿನಿಂದ ಸೈಕಲ್ ನೋಡುವ ಮಕ್ಕಳಿಗೆ ಖುಷಿಯಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ರಾಮಚಂದ್ರಾರೆಡ್ಡಿ, ಸಾಕ್ಷರ ಭಾರತ್ ಅಭಿಯಾನ ಸಂಯೋಜಕ ಜಿ.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್, ಶಾಲಾ ಟ್ರಸ್ಟ್ ಖಜಾಂಚಿ ಟಿ.ಪಿ.ನಾರೆಪ್ಪ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಬಸವಾಚಾರಿ, ಶಿಕ್ಷಕರಾದ ಬಿ.ವೆಂಕಟೇಶ್, ಪಿ.ಬಾಲಕೃಷ್ಣಪ್ಪ ಉಪಸ್ಥಿತರಿದ್ದರು.