ಮಾಗಡಿ: ‘ಬಿಸಿಯೂಟದ ಜವಾಬ್ದಾರಿಯನ್ನು ಶಿಕ್ಷಕರಿಂದ ಬೇರ್ಪಡಿಸಿ ಬೇರೆಯವರಿಗೆ ವಹಿಸುವುದು ಸೂಕ್ತ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇವತ್ತು ಶಿಕ್ಷಕರ ಕೆಲಸ ಎಂದರೆ ಬಿಸಿಯೂಟ ಬಡಿಸುವುದು, ಮಕ್ಕಳಿಗೆ ಹಾಲು ಕುಡಿಸುವುದು ಎಂಬಂತಾಗಿದೆ. ಸರ್ಕಾರ ಶಿಕ್ಷಕರನ್ನು ಗುಮಾಸ್ತರನ್ನಾಗಿ ಪರಿವರ್ತಿಸುತ್ತಿದೆ’ ಎಂದು ಅವರು ಟೀಕಿಸಿದರು.
‘ಶಿಕ್ಷಕರನ್ನು ಸರ್ವಶಿಕ್ಷಣ ಅಭಿಯಾನದಲ್ಲಿ ತೊಡಗಿಸುವ ಉದ್ದೇಶ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಶಿಕ್ಷಕರಿಗೆ ಪಾಠ ಮಾಡುವುದನ್ನು ಬಿಟ್ಟು ದಾಖಲೆ ಬರೆಯುವ ಮತ್ತು ಇತರೆ ಕೆಲಸಗಳ ಜವಾಬ್ದಾರಿಯೇ ಹೆಚ್ಚುತ್ತಿದೆ’ ಎಂದು ಪುಟ್ಟಣ್ಣ ಆತಂಕ ವ್ಯಕ್ತಪಡಿಸಿದರು.