ಗಜೇಂದ್ರಗಡ: ‘ವಿಜ್ಞಾನ ಶಿಕ್ಷಕ ಅಶೋಕ ಉಂಡಿ ಅವರು ತಮ್ಮ ಪರಿಶ್ರಮದಿಂದ ನಿರ್ಮಿಸಿದ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ಶಿಕ್ಷಕ ಸಮೂಹಕ್ಕೆ ಮಾದರಿ’ ಎಂದು ಬಾಗಲಕೋಟೆ ಜಿಲ್ಲೆಯ ಬದಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವಡಗೇರಿ ಅಭಿಪ್ರಾಯಪಟ್ಟರು.
ಸೋಮವಾರ ಇಲ್ಲಿಗೆ ಸಮೀಪದ ಸೂಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಗಂಡು ಮಕ್ಕಳ ಶಾಲೆಯ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಕ್ಕೆ ಭೇಟಿ ನೀಡಿದ ಅವರು, ‘ಮಕ್ಕಳ ಕಲಿಕೆಯ ಹಿತ ದೃಷ್ಟಿಯಿಂದ ಶಾಲೆಗೆ ದೇಣಿಗೆ ರೂಪದಲ್ಲಿ ನೀಡುವ ಹಣದಲ್ಲಿ ಸ್ವಂತ ಹಣ ಹಾಕಿ ಶಾಲೆಯಲ್ಲಿ ವ್ಯವಸ್ಥಿತ ಪ್ರಯೋಗಾಲ ನಿರ್ಮಿಸಿರುವ ಶಿಕ್ಷಕ ಅಶೋಕ ಉಂಡಿ ಅವರ ಕಾರ್ಯ ಶ್ಲಾಘನೀಯ’ ಎಂದರು
‘ಹಸಿರು, ಬಳವಡಕ, ಮಣ್ಣಮುಕ್ಕ, ನಾಗರಹಾವು, ಕಪ್ಪು ಮತ್ತು ಕೆಂಪು ಬಣ್ಣದ ಚೇಳುಗಳನ್ನು ಜೀವಂತವಾಗಿರಿಸಲಾಗಿದೆ. ಎತ್ತು, ಎಮ್ಮೆ, ಬಾತಕೋಳಿ, ಹೃದಯಗಳು, ಎತ್ತು, ಮೇಕೆಯ ಯಕೃತ್ತುಗಳು, ಎತ್ತು–ಎಮ್ಮೆ ಮರಿಗಳ ಕಣ್ಣುಗಳು, ಎತ್ತು ಆಡುಗಳ ಮೂತ್ರ ಜನಕಾಂಗಗಳನ್ನು ರಾಸಾಯನಿಗಳನ್ನು ಬೆರೆಯಿಸಿ ಸಂಗ್ರಹಿಸಿಡಲಾಗಿದೆ.
ಪರಿಣಾಮಕಾರಿ ಕಲಿಕೆಗೆ ನೆರವಾಗಲು ವಿವಿಧ ಪ್ರಾಣಿಗಳ ಆಯ್ಕೆ ಭಾಗಗಳನ್ನು ಸಹ ಪ್ರಯೋಗಾಲಯ ಒಳಗೊಂಡಿದೆ. ಶಿಕ್ಷಕ ಉಂಡಿ ಅವರು ಸಿದ್ಧಗೊಳಿಸಿದ ವಿಜ್ಞಾನ ಪ್ರಯೋಗಾಲಯ ವೀಕ್ಷಿಸಲು ರಾಜ್ಯದ ಮೂಲೆ–ಮೂಲೆಗಳಿಂದ ವಿದ್ಯಾರ್ಥಿಗಳು, ವಿವಿಧ ಪ್ರತಿಷ್ಠಾನಗಳು, ಶಿಕ್ಷಣ ತತ್ಞರು, ವಿಜ್ಞಾನಿಗಳು, ವಿದ್ಯಾರ್ಥಿಗಳು ಭೇಟಿ ನೀಡಿ
ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಶಿಕ್ಷರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಹಲವು ವಿದ್ಯಾರ್ಥಿಗಳು ಕಬ್ಬಿಣದ ಕಡೆಲೆಕಾಯಿ ಎಂದೇ ತಿಳಿದುಕೊಂಡಿರುವ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಸುಲಭದಲ್ಲಿ ತಿಳಿಸಿಕೊಡುವಲ್ಲಿ ಶಿಕ್ಷಕ ಉಂಡಿ ಯಶಸ್ವಿಯಾಗಿದ್ದಾರೆ. ಕಠಿಣ ವಿಷಯಗಳ ಬಗ್ಗೆಯೇ ಮಕ್ಕಳು ಹೆಚ್ಚು ಗಮನ ಹರಿಸಿ, ಆ ವಿಷಯಗಳ ಪಠ್ಯಗಳನ್ನು ಪ್ರೀತಿಸುವಂತೆ ಮಾಡುವಲ್ಲಿ ಇವರು ಎತ್ತಿದಕೈ ಎಂದರು.
ವಿವಿಧ ವಿಜ್ಞಾನ ಸಂಸ್ಥೆಗಳು ಹಾಗೂ ಪ್ರತಿಷ್ಠಾನಗಳ ಮೂಲಕ ‘ವಿಜ್ಞಾನ ಜಾತ್ರೆ’, ‘ವಿಜ್ಞಾನ ಮೇಳ’, ಪವಾಡ ರಹಸ್ಯ ಬಯಲು ಕಾರ್ಯಕ್ರಮ ಆಯೋಜಿಸುತ್ತಾರೆ. ಇದರಲ್ಲಿ ಶಾಲೆಯ 200 ವಿಜ್ಞಾನ ಮಾದರಿಗಳು ಹಾಗೂ ವಿವಿಧ ವಿಜ್ಞಾನ ಸಂಸ್ಥೆ, ಪ್ರತಿಷ್ಠಾನಗಳ 500 ವಿಜ್ಞಾನ ಮಾದರಿಗಳ ಪ್ರದರ್ಶನದ ಜತೆಗೆ ಶಾಲಾ ಮಕ್ಕಳೇ ವಿಜ್ಞಾನ ಮಾದರಿಗಳ ಕುರಿತು ವಿಶ್ಲೇಷಣೆ ಮಾಡುವುದು ಮಕ್ಕಳಿಗೆ ಪ್ರಯೋಗಾತ್ಮಕ ಕಲಿಕೆ ಮೇಲಿನ ಕಾಳಜಿಯನ್ನು ಹೆಚ್ಚಿಸಿದೆ ಎಂದರು.
ಮುಖ್ಯಶಿಕ್ಷಕ ಎಸ್.ಡಿ. ನಡುವಿನಮನಿ, ಸಹ ಶಿಕ್ಷಕರಾದ ಎಸ್.ಸಿ.ಬಾಗೂರ, ಪಿ.ಎಸ್. ಕುಂಟೋಜಿ, ವಿ.ಎಂ. ಹೊನ್ನಬಿಂದಗಿ, ಜೆ.ಡಿ.ಮ್ಯಾಗೇರಿ, ಎಂ.ಬಿ.ಮಡಿವಾಳರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.