ಬೆಂಗಳೂರು: ‘ಶಿಕ್ಷಣಕ್ಕೆ ಬದುಕನ್ನು ಬದಲಿಸುವ ಶಕ್ತಿಯಿದೆ. ಇದರಿಂದ ಎಲ್ಲರೂ ಶಿಕ್ಷಿತರಾಗಬೇಕು’ ಎಂದು ನಟ ಪುನೀತ್ರಾಜ್ಕುಮಾರ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ಉಲ್ಲಾಳ ಉಪನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಣ ಹಕ್ಕು ಕಾಯ್ದೆಯ ಜಾಗೃತಿ ಆಂದೋಲನದ ಚಿತ್ರೀಕರಣದಲ್ಲಿ ಸರ್ವ ಶಿಕ್ಷಣ ಅಭಿಯಾನದ ರಾಯಭಾರಿ ಪುನೀತ್ ರಾಜ್ಕುಮಾರ್ ಮಾತನಾಡಿದರು.
‘ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಕುರಿತು ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ. ಶಿಕ್ಷಣ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಉಂಟುಮಾಡುವ ಪರಿಣಾಮದ ಕುರಿತು ತಿಳಿವಳಿಕೆ ಮೂಡಿಸಬೇಕಿದೆ’ ಎಂದರು.
ಸರ್ವ ಶಿಕ್ಷಣ ಅಭಿಯಾನದ ರಾಯಭಾರಿಯಾಗಿರುವ ಕುರಿತು ಹರ್ಷ ವ್ಯಕ್ತಪಡಿಸಿದ ಅವರು, ‘ಸರ್ಕಾರದ ಜತೆಗೆ ಈ ಕಾರ್ಯದಲ್ಲಿ ಕೈ ಜೋಡಿಸಲು ನನಗೆ ಸಂತಸವಾಗಿದೆ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ವ ಶಿಕ್ಷಣ ಅಭಿಯಾನದ ನಿರ್ದೇಶಕ ಡಿ.ಬಸವರಾಜು ಮಾತನಾಡಿ, ‘6 ರಿಂದ 14 ವರ್ಷಕ್ಕಿಂತ ಹೆಚ್ಚಿನ ವರ್ಷದ ಮಕ್ಕಳಿಗೆ ಶಿಕ್ಷಣ ಹಕ್ಕಾಗಿದೆ. ಯಾರಾದರೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಲು ಮುಂದಾಗಿರುವುದು ತಿಳಿದರೆ ಕಾನೂನು ರೀತಿಯ ಕ್ರಮಕ್ಕೆ ಇಲಾಖೆ ಮುಂದಾಗುತ್ತದೆ’ ಎಂದರು.
‘ಶಿಕ್ಷಣ ಇಲಾಖೆಯ ಕಡ್ಡಾಯ ನೀತಿ ನಿಯಮಗಳನ್ನು ಜನರಿಗೆ ಪ್ರಚಾರದ ಮೂಲಕ ತಲುಪಿಸುವ ಉದ್ದೇಶದಿಂದ ಪುನೀತ್ ರಾಜ್ ಕುಮಾರ್ ಮತ್ತು ರಾಧಿಕಾ ಪಂಡಿತ್ ಅವರನ್ನು ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದರು.