ಬೆಂಗಳೂರು: ‘ಚಲನಚಿತ್ರ ನಿರ್ಮಾಣದಲ್ಲಿ ಶಿಸ್ತನ್ನು ರೂಢಿಸಿಕೊಂಡಾಗ ಚಿತ್ರರಂಗದ ಅಭಿವೃದ್ಧಿ ಸಾಧ್ಯ’ ಎಂದು ಹಿರಿಯ ಛಾಯಾಗ್ರಾಹಕ ಎಚ್.ಎಂ.ಕೆ.ಮೂರ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ವತಿಯಿಂದ ಭಾರತೀಯ ಚಲನಚಿತ್ರರಂಗದ ಶತಮಾನೋತ್ಸವ ಮತ್ತು ಕನ್ನಡ ಚಿತ್ರರಂಗದ 80ನೇ ವರ್ಷಾಚರಣೆಯ ಅಂಗವಾಗಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಮನೆ ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಲನಚಿತ್ರ ನಿರ್ಮಾಣದಲ್ಲಿ ನಿರ್ಮಾಪಕನಷ್ಟೆ ಜವಾಬ್ದಾರಿ ಛಾಯಾಗ್ರಾಹಕನ ಮೇಲಿರುತ್ತದೆ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಸರಿಯಾದ ಸಮಯಕ್ಕೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಮೂಲಕ ನಿರ್ಮಾಪಕನಿಗೆ ಸಹಕಾರ ನೀಡಬೇಕು. ಅನಗತ್ಯ ವೆಚ್ಚವನ್ನು ತಗ್ಗಿಸಬೇಕು ಎಂದರು.
ಅರವತ್ತರ ದಶಕದಲ್ಲಿ 30–40 ಚಿತ್ರಗಳು ತಯಾರಾಗುತ್ತಿದ್ದವು. ಆದರೆ, ಇಂದು 150ಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತಿವೆ. ‘ಡೆಬ್ರಿ ಕ್ಯಾಮೆರಾದಿಂದ ಡಿಜಿಟಲ್ ಕ್ಯಾಮೆರಾದವರೆಗೆ ತಂತ್ರಜ್ಞಾನ ಬೆಳವಣಿಗೆಯಾಗಿದೆ. ಚಿತ್ರರಂಗ ವಿಶಾಲವಾಗಿದೆ. ವಿಪುಲ ಅವಕಾಶಗಳು ಸೃಷ್ಟಿಯಾಗುತ್ತಿವೆ. ಛಾಯಾಗ್ರಾಹಕರು ಇದನ್ನು ಬಳಸಿಕೊಂಡು ಚಿತ್ರರಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹಿರಿಯ ಛಾಯಾಗ್ರಾಹಕ ಕೆ.ಜಾನಕಿರಾಂ, ಛಾಯಾಗ್ರಹಣವನ್ನು ಸಮರ್ಥವಾಗಿ ನಿರ್ವಹಿಸಿದರೆ ಹಣ, ಕೀರ್ತಿ ತಾನಾಗಿಯೆ ಬರುತ್ತದೆ ಎಂದರು.
ಉತ್ತಮ ತಂತ್ರಜ್ಞರನ್ನು ಚೆನ್ನೈ, ಮುಂಬೈಗಳಿಂದ ಕರೆಸಬೇಕಾಗಿತ್ತು. ಈಗ ನಗರದಲ್ಲಿಯೇ ಸಾಕಷ್ಟು ಪ್ರತಿಭಾವಂತ ತಂತ್ರಜ್ಞರಿದ್ದಾರೆ. ಅವರನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಹಿರಿಯ ಛಾಯಾಗ್ರಾಹಕ ವಿ.ಕೆ.ಮೂರ್ತಿ, ಚಿತ್ರರಂಗದಲ್ಲಿ ಕಳೆದ ಪ್ರತಿಕ್ಷಣ ಕೂಡ ಅಮೂಲ್ಯವಾಗಿವೆ. ಆರಂಭದ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಮೈ ಪುಳಕಗೊಳ್ಳುತ್ತದೆ. ಛಾಯಾಗ್ರಾಹಕರ ಸಂಘವು ಸನ್ಮಾನಿಸುತ್ತಿರುವುದು ಖುಷಿ ತಂದಿದೆ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಚ್.ಡಿ.ಗಂಗರಾಜು, ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ, ಉಪಾಧ್ಯಕ್ಷ ಬಿ.ಎಸ್.ಬಸವರಾಜು, ಪ್ರಧಾನ ಕಾರ್ಯದರ್ಶಿ ವಿ.ಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.