ಹುಮನಾಬಾದ್: ರಸ್ತೆ ವಿಸ್ತರಣೆ ಬಳಿಕ ಸುವರ್ಣ ಗ್ರಾಮೋದಯ ಯೋಜನೆ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ರಾಜಶೇಖರ ಬಿ.ಪಾಟೀಲ ತಿಳಿಸಿದರು. ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದರು.
ಹುಡಗಿಯನ್ನು ರಾಜ್ಯದ ಮಾದರಿ ಗ್ರಾಮವಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶೀಘ್ರದಲ್ಲೇ ವಿಶೇಷ ಸಭೆ ಕರೆದು, ರಸ್ತೆ ವಿಸ್ತರಣೆ ಕುರಿತು ನಿಣರ್ಯದ ನಡುವಳಿಕೆ ಪ್ರತಿ ನೀಡಿದರೆ ರಸ್ತೆ ವಿಸ್ತರಣೆ ಸಂಬಂಧ ಜಿಲ್ಲಾಧಿಕಾರಿ ಬಳಿ ಚರ್ಚಿಸುವುದಾಗಿ ಹೇಳಿದರು.
ಗ್ರಾಮ ಸ್ವಚ್ಛತೆ ವಿಷಯದಲ್ಲಿ ಪಂಚಾಯಿತಿ ಚುನಾಯಿತ ಪ್ರತಿನಿಧಿ ಹಾಗೂ ವಿವಿಧ ಹಂತದ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.
ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಗ್ರಾಮ ಸಂಚರಿಸಿ, ಸಮಸ್ಯೆ ಆಲಿಸಬೇಕು. ಗ್ರಾಮಸ್ಥರು ಇದಕ್ಕೆ ಸಹಕರಿಸಬೇಕು ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಪಿ.ನಾಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಪತಕುಮಾರ, ಸದಸ್ಯ ಜಲೀಲ್, ಪ್ರಭು ಮಾಳನಾಯಕ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಭುಲಿಂಗ, ಕಂಟೆಪ್ಪ ದಾನಾ, ಕರೆಪ್ಪ ಮಲಶೆಟ್ಟಿ, ರಾಮಣ್ಣ ಮೂಲಗಿ, ಮಲ್ಲಯ್ಯ ಸ್ವಾಮಿ, ಅಣ್ಯಪ್ಪ ಮಾಳಗಿ, ರಾಜಪ್ಪ ನಂದಿ, ಓಂಕಾರ ಸ್ವಾಮಿ, ರಾಜು ಮಾಶೆಟ್ಟಿ, ದಸಂಸ ಮುಖಂಡ ಮಾಣಿಕರಾವ ಬಿ.ಪವಾರ ಇದ್ದರು.