ಸುರಪುರ: ತಾಲ್ಲೂಕಿನಲ್ಲಿ ಶಿಕ್ಷಕರಿಗೆಗುರುಭವನದ ಕೊರತೆ ಇದೆ. ಗುರುಭವನ ನಿರ್ಮಾಣಕ್ಕೆ ಬದ್ಧ. ಎರಡು ವರ್ಷದೊಳಗೆ ಗುರುಭವನ ನಿರ್ಮಿಸುವುದಾಗಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಾವು ಓದುವಾಗಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎಸ್. ಕೆ. ನಾಯ್ಡು ಎಂಬ ಶಿಕ್ಷಕರು ಸಿಗದಿದ್ದರೆ ಈ ಸ್ಥಾನದಲ್ಲಿ ನಾನು ಇರುತ್ತಿರಲಿಲ್ಲ ಎಂದರು.
ದೇಶದ ಭವಿಷ್ಯವೆ ಶಿಕ್ಷಕರ ಕೈಯಲ್ಲಿದೆ. ಇದನ್ನು ಅರಿತು ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟಾಚಾರ ವ್ಯಾಪಕವಾಗಿದೆ. ಮುಂದಿನ ಪೀಳಿಗೆ ಇದರಲ್ಲಿ ಸಿಲುಕಬಾರದು. ಈ ರೀತಿಯಲ್ಲಿ ಶಿಕ್ಷಕರು ಮಕ್ಕಳನ್ನು ತಯಾರು ಮಾಡಬೇಕು. ಮಕ್ಕಳಲ್ಲಿ ಪ್ರಾಮಾಣಿಕತೆ, ದೇಶಾಭಿಮಾನ, ತುಂಬಬೇಕು ಎಂದು ಹೇಳಿದರು.
ಕೆಲವು ಶಿಕ್ಷಕರು ಸಮರ್ಪಕವಾಗಿ ಕರ್ತವ್ಯ ಮಾಡದಿರುವುದು ನನ್ನ ಗಮನಕ್ಕೆ ಬಂದಿದೆ. ಇಂತಹ ಶಿಕ್ಷಕರು ರಾಜಕೀಯದಲ್ಲಿ ತೊಡಗುತ್ತಿರುವುದು ಕಳವಳಕಾರಿ, ಇದು ಇತರ ಶಿಕ್ಷಕರು ಮತ್ತು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಾಂಜನೇಯ, ಜಿಲ್ಲಾ ಉಪ ಸಮನ್ವಯಾಧಿಕಾರಿ ಶಾಂತಗೌಡ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎ. ವ್ಹಿ. ಕೆಂಪರಂಗಯ್ಯ, ಉಪನ್ಯಾಸಕ ಉಪೇಂದ್ರನಾಯಕ ಸುಬೇದಾರ ಮಾತನಾಡಿದರು.
ಅಬ್ದುಲ್ ಪಟೇಲ್ ಸ್ವಾಗತಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಸೋಮರೆಡ್ಡಿ ಮಂಗಿಹಾಳ ವಂದಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಪಾಟೀಲ, ಪುರಸಭೆ ಅಧ್ಯಕ್ಷ ದೇವೀಂದ್ರಪ್ಪ ಕಳ್ಳಿಮನಿ, ಎಪಿಎಂಸಿ ಅಧ್ಯಕ್ಷ ಬಸಣ್ಣ ಬಂಗಿ, ಅಜೀಂ ಪ್ರೇಮಜಿ ಫೌಂಡೇಶನ್ ಜಿಲ್ಲಾ ಮುಖ್ಯಸ್ಥ ಎಸ್. ರುದ್ರೇಶ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ, ಮಹಾದೇವರೆಡ್ಡಿ, ಬಸವರಾಜ ಇನಾಮದಾರ, ಭೀಮಣ್ಣ ಭೊಸ್ಗಿ, ಪಡಿಯಣ್ಣ ಬೆಳ್ಳುಬ್ಬಿ, ಗುರುಲಿಂಗಪ್ಪ ಖಾನಾಪುರ, ಚಂದ್ರಕಾಂತ ಕೊಣ್ಣೂರ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತುತ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.