ಕಾಸರಗೋಡು: ರಾಜ್ಯದಲ್ಲಿ ಸರ್ಕಾರ ಜಾರಿಗೊಳಿಸುವ ಶುದ್ಧಜಲ ವಿತರಿಸುವ ಯೋಜನೆಗಳಲ್ಲಿ ಗುಣಮಟ್ಟದ ಪೈಪುಗಳನ್ನು ಮಾತ್ರ ಅಳವಡಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಪಿ.ಜೆ.ಜೋಸೆಫ್ ಹೇಳಿದರು.
ಮಂಗಳವಾರ ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿಯಲ್ಲಿ ಕೇರಳ ಜಲಸಂಪನ್ಮೂಲ ಇಲಾಖೆ ಜಾರಿಗೊಳಿಸುವ ಶುದ್ಧಜಲ ವಿತರಣಾ ಯೋಜನೆಯ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಲ್ಲಿ ಒಳಪಡಿಸಿ ಈಸ್ಟ್ ಎಳೇರಿ ಕುಡಿಯುವ ನೀರು ಯೋಜನೆ ಜಾರಿಗೊಳಿಸಲಾತ್ತದೆ. ಈಸ್ಟ್ ಎಳೇರಿ ಕಾರ್ಯಗೊಂಡು ನದಿಯಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಲಾಗಿದೆ.
ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುವುದು ಎಂದರು. ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳನ್ನು ಗುಣಮಟ್ಟದ ಪೈಪ್ಗಳನ್ನು ಬಳಸಿ ಶೀಘ್ರದಲ್ಲಿ ಪೂರ್ತಿಗೊಳಿಸಲಾಗುವುದು. ಈಸ್ಟ್ ಎಳೇರಿ ಯೋಜನೆ 2015 ಮಾರ್ಚ್ನಲ್ಲಿ ಪೂರ್ತಿಯಾಗಲಿದೆ. ರೂ.12.12ಕೋಟಿ ವೆಚ್ಚದಲ್ಲಿ ಆರಂಭಗೊಳ್ಳುವ ಈ ಯೋಜನೆ 21,000ಮಂದಿಗೆ ಪ್ರಯೋಜನ ವಾಗಲಿದೆ ಎಂದು ಸಚಿವರು ತಿಳಿಸಿದರು.
ತೃಕ್ಕರಿಪುರ ಶಾಸಕ ಕೆ.ಕುಂಞಿರಾಮನ್ ಅಧ್ಯಕ್ಷತೆ ವಹಿಸಿದ್ದರು. ಕೇರಳ ಜಲ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಪಿ.ಡಿ.ರಾಜು ಯೋಜನೆಯ ಮಾಹಿತಿ ನೀಡಿದರು. ಈಸ್ಟ್ ಎಳೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೇಮ್ಸ್, ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ವಿ.ಬಿ.ಟೋಮಿ ಪಚ್ಚೇರಿ ಮತ್ತಿತರರು ಉಪಸ್ಥಿತರಿದ್ದರು.