ಬೆಂಗಳೂರು: ‘ಮುಂದಿನ ಆರ್ಥಿಕ ವರ್ಷಾಂತ್ಯಕ್ಕೆ ಶ್ರೀನಿಧಿ ಸೌಹಾರ್ದ ಸಹಕಾರಿ ಬ್ಯಾಂಕಿನ ನೂತನ ಮೂರು ಶಾಖೆಗಳನ್ನು ತೆರೆಯಲಾಗುವುದು’ ಎಂದು ಬ್ಯಾಂಕಿನ ಅಧ್ಯಕ್ಷ ಸದಾಶಿವ ರೆಡ್ಡಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಬ್ಯಾಂಕಿನ ಸರ್ವಸದಸ್ಯರ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನೂತನ ಶಾಖೆಗಳನ್ನು ತೆರೆಯಲು ಉತ್ತರಹಳ್ಳಿ, ಯಲಹಂಕ/ಹೆಸರಘಟ್ಟ, ಬನ್ನೇರುಘಟ್ಟ/ದೊಮ್ಮಸಂದ್ರ ಪ್ರದೇಶಗಳನ್ನು ಗುರುತಿಸಿದ್ದು, ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವುದು. ಗ್ರಾಹಕರು ಬ್ಯಾಂಕಿನ ಸೇವೆಯನ್ನು ಯಾವುದೇ ಶಾಖೆಯಲ್ಲಿ ಪಡೆಯಲು ಕೋರ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯ ಒದಗಿಸುವ ಯೋಜನೆ ಇದೆ’ ಎಂದರು.
‘ಈ ಆರ್ಥಿಕ ವರ್ಷದಲ್ಲಿ ₨ 53 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕಿನ ದುಡಿಯುವ ಬಂಡವಾಳವು ₨100 ಕೋಟಿ ದಾಟಿ ಶೇ 42ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು ₨1.43 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಪ್ರಸಕ್ತ ವರ್ಷದಲ್ಲಿ ಶೇಕಡಾ 14ರಷ್ಟು ಡಿವಿಡೆಂಡ್ ನೀಡಲು ನಿರ್ಧರ ಮಾಡಲಾಗಿದೆ’ ಎಂದು ಇದೇ ವೇಳೆ ಹೇಳಿದರು.