ಧಾರವಾಡ: ‘ಸಂಗೀತವು ಆತ್ಮ ಸಾಕ್ಷಾತ್ಕಾರಕ್ಕೆ ಪ್ರಮುಖ ಮಾಧ್ಯಮವಾಗಿದೆ. ಮನಸ್ಸು ಮತ್ತು ಮಾನಸಿಕ ಕಾಯಿಲೆಗಳಿಗೆ ಉಪಶಮನ ನೀಡುತ್ತದೆ’ ಎಂದು ಇಂಗ್ಲಿಷ್ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರ ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪವು ಇತ್ತೀಚೆಗೆ ಆಯೋಜಿಸಿದ್ದ ರೇಷ್ಮಾ, ರಮ್ಯಾ ಭಟ್ ಅವರ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಸಂಗೀತವು ಆತ್ಮ ಮತ್ತು ದೇಹಕ್ಕೆ ಸಂಸ್ಕಾರವನ್ನು ಒದಗಿಸಿಕೊಡುವುದಲ್ಲದೆ, ಬದುಕಿರುವಷ್ಟು ದಿನ ಸಂತೋಷ ನೀಡುವ ಅಂತಃಶಕ್ತಿಯಾಗಿದೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ.ಅಶೋಕ ಹುಗ್ಗಣ್ಣವರ, ‘ಮನಸ್ಸು ಮತ್ತು ಆತ್ಮ ಕೇಂದ್ರೀಕರಿಸಿ ನಿರಂತರ ಕೃಷಿಯಿಂದ ಸಂಗೀತದಲ್ಲಿ ಅಗಾಧ ಸಾಧನೆ ಮಾಡಬಹುದು. ಇಂದಿನ ಯುವ ಪ್ರತಿಭೆಗಳು ಸಂಗೀತದತ್ತ ಆಸಕ್ತಿ ವಹಿಸಬೇಕು’ ಎಂದರು.
ಅರ್ಚನಾ ಭಟ್ ಪ್ರಾರ್ಥನೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿದರು.
ಯುವಜನ ಮಂಟಪ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಸಂಚಾಲಕ ಗುರು ಹಿರೇಮಠ ವಿವರಿಸಿದರು. ಡಾ.ಸ್ನೇಹಾ ಜೋಶಿ ನಿರೂಪಿಸಿ ವಂದಿಸಿದರು. ರೇಷ್ಮಾ ಭಟ್ ಹಾಗೂ ರಮ್ಯಾ ಭಟ್ ಸಹೋದರಿಯರು ಶಾಸ್ತ್ರೀಯ ಹಾಗೂ ಸುಗಮ ಸಂಗೀತ ನಡೆಸಿಕೊಟ್ಟರು. ಅಲ್ಲಮಪ್ರಭು ಕಡಕೋಳ ತಬಲಾ, ವಿಜಯಕುಮಾರ್ ತೇಲಿ ಹಾರ್ಮೋನಿಯಂ ಸಾಥ್ ನೀಡಿದರು.