ನ್ಯೂಯಾರ್ಕ್ (ಪಿಟಿಐ): ತಮ್ಮ ಕಕ್ಷಿ-ದಾರಳ ವಿರುದ್ಧ ನಡೆದಿರುವ ಅಪರಾಧ ಗೌಣವಾಗಿ ಬಂಧನದ ವಿಚಾರವೇ ಹೆಚ್ಚು ಪ್ರಚಾರ ಪಡೆದಿರುವ ಬಗ್ಗೆ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಮನೆಗೆಲಸದ ಸಹಾಯಕಿ ಪರ ವಕೀಲರು ವಿಷಾದ ವ್ಯಕ್ತಪಡಿಸಿದ್ದಾರೆ. ದೇವಯಾನಿ ಅವರು ಎಸಗಿರುವ ಅಪರಾಧದ ಬಗ್ಗೆ ಚಕಾರವೆತ್ತದೆ ಅವರನ್ನು ಬಂಧಿಸಿರುವುದನ್ನೇ ಮಾಧ್ಯಮಗಳು ಮತ್ತು ಅಧಿಕಾರಿಗಳು ದೊಡ್ಡದಾಗಿ ಪ್ರಚಾರ ಮಾಡುತ್ತಿವೆ. ಇದೊಂದು ನೋವಿನ ಸಂಗತಿ ಎಂದು ಅಟಾರ್ನಿ ಡನಾ ಸುಸ್ಸಮನ್ ತಿಳಿಸಿದ್ದಾರೆ.
ಮನೆ ಕೆಲಸದ ಸಹಾಯಕಿ ಸಂಗೀತಾ ರಿಚರ್ಡ್ಗೆ ನಿಗದಿಪಡಿಸಿದ ಸಂಬಳ ನೀಡದೆ ಕಡಿಮೆ ಸಂಬಳ ನೀಡಿದ್ದಲ್ಲದೆ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅಪರಾಧವೆಸಗಿದ ದೇವಯಾನಿ ಅವರ ತಪ್ಪಿನ ಬಗ್ಗೆ ಮಾಧ್ಯಮಗಳು ಮತ್ತು ಅಧಿಕಾರಿಗಳು ಏನನ್ನೂ ಹೇಳದಿರುವುದು ತುಂಬಾ ವಿಷಾದಕರ ಸಂಗತಿ ಎಂದು ಅವರು ತಿಳಿಸಿದ್ದಾರೆ.
ತಮ್ಮ ಕಕ್ಷಿದಾರಳು ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ಕೆಲಸ ಮಾಡಿದ್ದಾಳೆ. ಕೊನೆಗೆ ಬೇಸತ್ತು ದೂರು ನೀಡಿದ್ದಾಳೆ ಎಂದು ತಿಳಿಸಿದ್ದಾರೆ.
ಜೂನ್ನಿಂದ ಸಂಗೀತಾ ಮತ್ತು ಅವರ ಕುಟುಂಬದ ಸದಸ್ಯರು ನಾಪತ್ತೆಯಾಗಿರುವ ಬಗ್ಗೆ ಭಾರತದ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿರುವ ಬಗ್ಗೆ ಮಾತ್ರ ಅಟಾರ್ನಿ ಏನನ್ನೂ ಹೇಳಿಲ್ಲ.
ಭಾರತದಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆ ಬಗ್ಗೆ ಏನನ್ನೂ ಹೇಳಬಯಸುವುದಿಲ್ಲ. ಈ ಹಂತದಲ್ಲಿ ತಮ್ಮ ಕಕ್ಷಿದಾರಳು ಮಾಧ್ಯಮದ ಎದುರು ಬರುವುದು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.