ಬೆಂಗಳೂರು: ‘ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಣ್ಣ ಸಮುದಾಯಗಳು ಸಂಘಟಿತವಾಗಿ ಹೋರಾಟ ನಡೆಸ ಬೇಕು. ಆಗ ಮಾತ್ರ ಸಮಾಜದಲ್ಲಿ ಸಮಾನತೆ ಬರಲು ಸಾಧ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅವಕಾಶ ವಂಚಿತ ಸಮುದಾಯ ಗಳು, ಶೋಷಣೆಗೆ ಒಳಗಾದ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಜಾತಿ ಸಮಾವೇಶ ನಡೆಸಿ ತಮ್ಮ ಹಕ್ಕೊತ್ತಾಯ ಮಂಡಿಸು ವುದರಿಂದ ಸಮಾಜಕ್ಕೆ ತೊಂದರೆ ಯೇನೂ ಇಲ್ಲ. ಇದನ್ನೇ ರಾಮ ಮನೋಹರ ಲೋಹಿಯಾ ಕೂಡಾ ಪ್ರತಿಪಾದಿಸಿದ್ದರು. ಜಾತಿ ಸಮಾವೇಶ ಗಳಿಗೆ ಬರುವ ಟೀಕೆಗಳಿಗೆ ಸಮುದಾಯ ದವರು ಹೆಚ್ಚು ಗಮನ ನೀಡಬಾರದು. ವಿಶ್ವಕರ್ಮ ಸಮುದಾಯದವರು ಮುಖ್ಯವಾಹಿನಿಗೆ ಬರಲು ಪ್ರಯತ್ನಿಸ ಬೇಕು’ ಎಂದರು.
‘ವಿಶ್ವಕರ್ಮ ಸಮುದಾಯದ ಜನ ಕುಶಲಿಗರು ಮತ್ತು ಬುದ್ಧಿವಂತರು. ಆದರೆ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿ ದಿದ್ದಾರೆ. ಹೀಗಾಗಿ ಸಮುದಾಯದ ಅಭಿವೃದ್ಧಿಗಾಗಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಘೋಷಿಸಿ, ನಿಗಮಕ್ಕಾಗಿ ರೂ.5 ಕೋಟಿ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ನಿಗಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು. ನಿಗಮಕ್ಕೆ ಹೆಚ್ಚಿನ ಹಣಕಾಸಿನ ಅಗತ್ಯ ಬಿದ್ದರೆ ಅದನ್ನು ನೀಡಲು ಸರ್ಕಾರ ಬದ್ಧವಿದೆ’ ಎಂದು ಹೇಳಿದರು.
‘ವಿಶ್ವಕರ್ಮ ಸಮುದಾಯದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕೆಂಬ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ವಿಶ್ವಕರ್ಮ ಜಯಂತಿಗೆ ರಜೆ ಘೋಷಿಸಬೇಕೆಂಬ ಬೇಡಿಕೆಯ ಬಗ್ಗೆ ಈಗಲೇ ಭರವಸೆ ನೀಡುವುದು ಸಾಧ್ಯವಿಲ್ಲ. ಈ ಬಗ್ಗೆ ಅನೇಕ ಕಾನೂನು ತೊಡಕುಗಳಿವೆ’ ಎಂದು ತಿಳಿಸಿದರು.
ಚಿತ್ರದುರ್ಗದ ಕೆ.ಎಸ್.ಮಂಜುನಾಥಾಚಾರ್, ಕೋಲಾರದ ಎಸ್.ವಿ. ಪದ್ಮನಾಭಾ ಚಾರ್, ಕುಂದಾಪುರದ ಲಕ್ಷ್ಮ ೀನಾರಾಯಣಾಚಾರ್, ಮಂಗಳೂರಿನ ಕೆ.ಪಿ.ರಾವ್ ಅವರಿಗೆ ‘ವಿಶ್ವಕರ್ಮ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.