ನಾಗಮಂಗಲ : ‘ರಾಜ್ಯಮಟ್ಟದ ಜಾನಪದ ಕಲಾಮೇಳಗಳನ್ನು ರಾಜ್ಯದ ಹಾಗೂ ದೇಶದ ಬೇರೆ ಬೇರೆ ಮಠಗಳೂ ಆಚರಿಸಲಿ. ಇದಕ್ಕೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಾದರಿಯಾಗಲಿ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ 35 ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಆದಿಚುಂಚನಗಿರಿ ಕ್ಷೇತ್ರಕ್ಕೂ ಜಾನಪದಕ್ಕೂ ಹಿಂದಿನಿಂದಲೂ ನಂಟು. ನಾಡಿನೆಲ್ಲೆಡೆಗಳಿಂದ ಹತ್ತಾರು ಸಾವಿರ ಜನಪದ ಕಲಾವಿದರೂ ಒಂದೆಡೆ ಕಲೆತು ತಮ್ಮ ಕಲೆಗಳನ್ನು ಪ್ರಸ್ತುತ ಪಡಿಸುವುದು ಬಹು ದೊಡ್ಡ ವಿಶೇಷ. ಇಂತಹ ಜಾನಪದ ಕಲಾಮೇಳವನ್ನು ಉದ್ಘಾಟಿಸಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎಂದರು. ಜಾನಪದ ಕಲಾಮೇಳಕ್ಕೆ ಕಳೆದ 34 ವರ್ಷಗಳ ಹಿಂದೆ ನಾಂದಿ ಹಾಡಿದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಪಡೆದ ನಮ್ಮ ನಾಡು ಧನ್ಯ ಎಂದರು
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಾ ನಾಡಿನ ಸಂಸ್ಕೃತಿಯ ಬೇರುಗಳು ಜನಪದ ಸಾಹಿತ್ಯ. ಯಾವ ನದಿ ಬತ್ತಿ ಹೋದರೂ ಮಳೆಗಾಲದಲ್ಲಿ ತುಂಬುತ್ತದೆ ಆದರೆ ಒಮ್ಮೆ ಒಂದು ನಾಡಿನಲ್ಲಿ ಜಾನಪದ ಕಲೆ ನಶಿಸಿದರೆ ಪುನಃ ಅದನ್ನು ಆ ನಾಡಿನಲ್ಲಿ ತುಂಬಲು ಸಾಧ್ಯವಾಗದು. ಯಾವ ಆಧುನಿಕ ಸಾಹಿತ್ಯವು ಮನುಷ್ಯನ ಭಾವನೆಗಳನ್ನು ಜಾನಪದ ಸಾಹಿತ್ಯದಷ್ಟು ಅರ್ಥವತ್ತಾಗಿ ತುಂಬಿಕೊಡಲು ಸಾಧ್ಯವಾಗಿಲ್ಲ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀ ಕೃಷ್ಣಮೂರ್ತಿ ಇದ್ದರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಪ್ರಾಚಾರ್ಯ ಪ್ರೊ.ಸಿ.ನಂಜುಂಡಯ್ಯ ಕಾರ್ಯಕ್ರಮ ಇದ್ದರು.