ಬೆಂಗಳೂರು: ಕರ್ನಾಟಕದಲ್ಲಿ ಜಾರಿಯಲ್ಲಿರುವ ‘ಸಕಾಲ’ ಯೋಜನೆಯಿಂದ ಪ್ರಭಾವಕ್ಕೆ ಒಳಗಾಗಿರುವ ಪಾಕಿಸ್ತಾನದ ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯದ ಸರ್ಕಾರಗಳು ಇದೇ ಮಾದರಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಆಸಕ್ತಿ ತೋರಿವೆ.
‘ಸಕಾಲ’ ಯೋಜನೆಯ ಕಾರ್ಯವಿಧಾನ ಅತ್ಯುತ್ತಮವಾಗಿದೆ ಎಂದು ಆ ಕುರಿತು ಅಧ್ಯಯನ ನಡೆಸಲು ಬಂದಿರುವ ಪಾಕಿಸ್ತಾನದ ನಿಯೋಗ ಅಭಿಪ್ರಾಯಪಟ್ಟಿದೆ.
ಪಾಕಿಸ್ತಾನದ ತಂಡಕ್ಕೆ ಯೋಜನೆ ಕುರಿತು ವಿವರ ನೀಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು, ತಂತ್ರಜ್ಞಾನದ ಸಹಾಯದಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸಲು ಸಾಧ್ಯವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಮತ್ತು ತ್ವರಿತ ಸೇವೆ ಒದಗಿಸುವಲ್ಲಿ ‘ಸಕಾಲ’ ಬಹುತೇಕ ಯಶಸ್ವಿಯಾಗಿದೆ. ಹಿಂದಿನ ಸರ್ಕಾರ ಜಾರಿಗೊಳಿಸಿದ ಉತ್ತಮ ಕಾರ್ಯಕ್ರಮಗಳನ್ನು ಪ್ರಸಕ್ತ ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಈ ಯೋಜನೆ ಅಡಿ ಇನ್ನಷ್ಟು ಸೇವೆಗಳನ್ನು ತರಲು ಸರ್ಕಾರ ಉದ್ದೇಶಿಸಿದೆ ಎಂದರು.
ತಂಡದಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಸಭೆಯ ಸದಸ್ಯರಾದ ಮಜೀದ್ ಜಹೂರ್, ಮಕ್ದಮ್ ಹಶೀಮ್ ಜವಾನ್ ಭಕ್ತ್, ಪಾಕಿಸ್ತಾನದ ಹಣಕಾಸು ಇಲಾಖೆ ಕಾರ್ಯದರ್ಶಿ ಮಹಮದ್ ಸೊಹೈಲ್ ಖಾನ್ ಹಾಗೂ ವಿಶ್ವ ಬ್ಯಾಂಕ್ ಪ್ರತಿನಿಧಿಗಳು ಇದ್ದರು.
‘ಸಕಾಲ’ ಯೋಜನೆಯ ಹೆಚ್ಚುವರಿ ನಿರ್ದೇಶಕ ಆರ್. ಮನೋಜ್, ನೋಡಲ್ ಅಧಿಕಾರಿ ಡಾ. ಬಿ.ಆರ್. ಮಮತಾ, ಆಡಳಿತಾಧಿಕಾರಿ ವರಪ್ರಸಾದ್ರೆಡ್ಡಿ ಉಪಸ್ಥಿತರಿದ್ದರು.