ಮೆನ್ನಬೆಟ್ಟು (ಮೂಲ್ಕಿ): ಕೇವಲ ನಗರದಲ್ಲಿ ಮಾತ್ರ ಸೀಮಿತವಾಗಿದ್ದ ಸಕ್ಕಿಂಗ್ ಯಂತ್ರವನ್ನು ಮುಂದಿನ ದಿನದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ವಿತರಿಸಲಾಗುವುದು. ಪ್ರಥಮ ಹಂತವಾಗಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ನೀಡಿದ್ದು ಈ ಬಗ್ಗೆ ಜನ ಜಾಗೃತಿಯೂ ಅಗತ್ಯವಾಗಿದೆ ಎಂದು ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತುಳಸಿ ಮದ್ದಿನೇನಿ ಹೇಳಿದರು.
ಕಿನ್ನಿಗೋಳಿ ಬಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಸಕ್ಕಿಂಗ್ ಯಂತ್ರವನ್ನು ಬುಧವಾರ ಹಸ್ತಾಂತರಿಸಿದ ಅವರು ಈ ಬಗ್ಗೆ ಗ್ರಾಮ ಪಂಚಾಯಿತಿಯ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾಹಿತಿ ನೀಡಿದರು.
ಸಕ್ಕಿಂಗ್ ಯಂತ್ರದ ಬಗ್ಗೆ ಅದರ ಪ್ರವರ್ತಕರಾದ ಮೈಸೂರು ಭಗೀರಥ ಸಂಸ್ಥೆಯ ಕುಲಕರ್ಣಿ ಅವರು ಯಂತ್ರದ ಚಾಲನೆಯ ಮಾಹಿತಿ ನೀಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಗ್ರಾಮದ ಅಭಿವೃದ್ಧಿಯಲ್ಲಿ ತೊಡಕಾಗಿರುವ ಹಲವು ಸಮಸ್ಯೆಗಳನ್ನು ಹಾಗೂ ಕಟೀಲು ಕ್ಷೇತ್ರದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಸದಸ್ಯ ಕೇಶವ ಕರ್ಕೇರ, ಜಿಲ್ಲಾ ನೆರವು ಘಟಕದ ಮಂಜುಳಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಇನ್ನಿತರರು ಹಾಜರಿದ್ದರು.ಕಳೆದ ಕೆಲವು ತಿಂಗಳುಗಳ ಹಿಂದೆ ಮೆನ್ನಬೆಟ್ಟು ಗ್ರಾಮದ ಕಿನ್ನಿಗೋಳಿಯ ಹೋಟೆಲ್ನ ಶೌಚಾಲಯದ ಗುಂಡಿಯಲ್ಲಿ ಕಾರ್ಮಿಕನೊಬ್ಬ ಮಾನವ ಶ್ರಮದ ಮೂಲಕ ತ್ಯಾಜ್ಯವನ್ನು ತೆಗೆಯುತ್ತಿದ್ದಾಗ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಬಳಿಕ ಸಕ್ಕಿಂಗ್ ಯಂತ್ರಕ್ಕೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯು ಜಿಲ್ಲಾ ಪಂಚಾಯಿತಿ ಮೂಲಕ ಬೇಡಿಕೆ ಸಲ್ಲಿಸಿತ್ತು.