ಸುರತ್ಕಲ್: ‘ಮಾನವರ ಹಕ್ಕುಗಳಿಗೆ ಬೆಲೆ ನೀಡಿ ಸಮಾನತೆ ಮತ್ತು ನ್ಯಾಯಪರತೆಯನ್ನು ಕಾಪಾಡುವಲ್ಲಿ ಭಾರತ ತೀರಾ ಕೆಳಮಟ್ಟದಲ್ಲಿದೆ. ಮಾನವ ಹಕ್ಕು ರಕ್ಷಿಸುವಲ್ಲಿ ಭಾರತ ಕಳಪೆ ಸಾಧನೆ ತೋರಿಸಿದೆ. ಇಲ್ಲಿನ ಕಾನೂನು ಉಳ್ಳವರ ಮತ್ತು ಪೊಲೀಸರ ಕಪಿ ಮುಷ್ಟಿಯಲ್ಲಿ ನಲುಗುತ್ತಿದೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಘಟನೆಯ ಗೌರವ ಪ್ರಧಾನ ಕಾರ್ಯದರ್ಶಿ ಶಲೀಲ್ ಶೆಟ್ಟಿ ತಿಳಿಸಿದರು.
ಬೈಕಂಪಾಡಿ ಬರ್ಟ್ರಂಡ್ ರಸ್ಸೆಲ್ ಪ್ರೌಢಶಾಲೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ನಡೆದ ಸಂವಾದದಲ್ಲಿ ಈ ವಿಚಾರ ತಿಳಿಸಿದರು.
ಭಾರತದಲ್ಲಿ 1993ರಿಂದ 2009ರವರೆಗೆ ಎರಡು ಸಾವಿರ ನಕಲಿ ಎನ್ಕೌಂಟರ್ ನಡೆದಿವೆ ಎಂದರು.ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ನಿರಂತರ ಎಂಬಂತೆ ಹೆಚ್ಚುತ್ತಲೇ ಇದೆ. ಇದು ತೀರಾ ಕಳವಳಕಾರಿ ವಿಚಾರ ಎಂದರು.
ಬಾಂಗ್ಲಾ, ಶ್ರೀಲಂಕಾ, ಮ್ಯಾನ್ಮಾರ್ ಮತ್ತು ಕೊರಿಯಾದಲ್ಲಿ ಮಾನವ ಹಕ್ಕು ಉಲ್ಲಂಘಟನೆಯಂತಹ ಘಟನೆ ನಡೆಯುತ್ತಲೆ ಇದೆ. ಈ ಎಲ್ಲ ದೇಶಗಳ ನಡುವೆ ಅತ್ಯಂತ ಹೆಚ್ಚು ಎತ್ತರದ ಸ್ಥಾನದಲ್ಲಿರುವ ಭಾರತ ಮಾತ್ರ ಯಾವುದೇ ರೀತಿಯಲ್ಲಿ ಧ್ವನಿ ಎತ್ತುತ್ತಿಲ್ಲ ಎಂದರು. ಎನ್ಎಂಪಿಟಿಯ ಪ್ರಭಾರ ಅಧ್ಯಕ್ಷ ಟಿ.ಎಸ್.ಎನ್.ಮೂರ್ತಿ ಮತ್ತು ಅಬೂಬಕ್ಕರ್ ಕುಕ್ಕಾಡಿ ಉಪಸ್ಥಿತರಿದ್ದರು.