ಅಕ್ಕಿಆಲೂರ: ‘ಜಾಗತಿಕ ಇತಿಹಾಸದ ಆರಂಭದಿಂದಲೂ ಸಬಲರ ಮತ್ತು ದುರ್ಬಲರ ಮಧ್ಯೆ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಒಂದು ವರ್ಗ ಮತ್ತೊಂದು ವರ್ಗದ ಮೇಲೆ ಶೋಷಣೆ ನಡೆಸುತ್ತಿರುವುದು ಸಾಮಾನ್ಯವಾಗಿದೆ.
ಶೋಷಣೆಗೆ ಒಳಗಾದ ಸಮುದಾಯವೇ ದೊರೆತ ಅವಕಾಶಗಳನ್ನು ವಿವೇಚನೆಯಿಂದ ಬಳಸಿ ಪ್ರಬಲರಾಗಿ ತಮ್ಮದೇ ಸಮುದಾಯದ ಇತರೆ ದುರ್ಬಲರನ್ನು ಶೋಷಣೆ ಮಾಡುತ್ತಿರುವುದು ದುರಂತ’ ಎಂದು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ವಿಷಾದಿಸಿದರು.
ಸ್ಥಳೀಯ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಗುರುದೇವ ಚಿರಡೋಣಿ ರಚಿಸಿರುವ ‘ಅಹಿಂಸಾವಾದಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ವಿಶ್ವದ ಮಾನವತಾವಾದಿಗಳ ಹಾದಿ ತುಳಿದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅಮೆರಿಕದಲ್ಲಿ ಜಾರಿಯಲ್ಲಿದ್ದ ವರ್ಣಬೇಧ ನೀತಿ ಹಾಗೂ ಕರಿಯರ ಮೇಲಿನ ದಬ್ಬಾಳಿಕೆ ಮತ್ತು ಶೋಷಣೆಗಳ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಟ ನಡೆಸಿದವರು. ಅಂಥ ಮಹಾನ್ ಚೇತನದ ಬದುಕು–ಸಾಧನೆ ಕುರಿತು ಬೆಳಕು ಚೆಲ್ಲುವ ಅರ್ಥಪೂರ್ಣ ಪ್ರಯತ್ನ ಈ ಕೃತಿಯ ಮೂಲಕ ಯಶಸ್ವಿಯಾಗಿ ನಡೆದಿದೆ’ ಎಂದರು. ಉಪನ್ಯಾಸಕ ಡಾ.ಎಸ್.ಜಿ.ವೈದ್ಯ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ಡಿ.ಬಿ.ಮುಗಳಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಗ್ರಾ.ಪಂ. ಅಧ್ಯಕ್ಷೆ ನಂದಿನಿ ವಿರೂಪಣ್ಣನವರ, ವಾಣಿಜ್ಯೋದ್ಯಮಿ ಸಿ.ಸಿ.ಬೆಲ್ಲದ, ಚಿಂತಕ ಡಾ.ಹಾಲತಿ ಸೋಮಶೇಖರ, ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶ ವಿಭಾಗದ ಸಂಪಾದಕ ಡಾ.ಹಾ.ತಿ.ಕೃಷ್ಣೇಗೌಡ, ‘ಅರುಹು’ ತ್ರೈಮಾಸಿಕ ಸಂಪಾದಕ ಪ್ರೊ.ಎಚ್.ಎಸ್.ಉಮೇಶ, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಮಾಸಣಗಿ, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಜಿ.ಶಾಂತಪೂರಮಠ,
ಮಂಜುನಾಥ.ಎಸ್.ಎಂ, ನಾಗರಾಜ್ ಅಡಿಗ, ನಾಗರಾಜ್ ಪಾವಲಿ, ಎಸ್.ಎಸ್.ಮುಚ್ಚಂಡಿ, ಟಿ.ಶಿವಕುಮಾರ, ಎಸ್.ಎಸ್.ಬಮ್ಮಿಗಟ್ಟಿ, ಪ್ರಭು ಗುರಪ್ಪನವರ, ರಾಜಶೇಖರ ಪರೆಗೊಂಡರ ಈ ವೇಳೆ ಹಾಜರಿದ್ದರು. ಡಾ.ಮಲ್ಲಿಕಾರ್ಜುನ ಕಡ್ಡಿಪುಡಿ ಸ್ವಾಗತಿಸಿದರು. ಎಸ್.ಎಂ.ಗುರುದೇವ ಪ್ರಾಸ್ತವಿಕವಾಗಿ ಮಾತನಾಡಿದರು. ಸ್ಟೆಫಿ ಗೋಕಾವಿ ನಿರೂಪಿಸಿದರು. ಸುರೇಶ ದೊಡ್ಡಮನಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.