ಬೆಂಗಳೂರು: ‘ಸಮಾಜದಲ್ಲಿ ಸರ್ವ ಧರ್ಮ ಸಮಾನತೆಯನ್ನು ಸಾಧಿಸಬೇಕು. ಎಲ್ಲರನ್ನೂ ಮಾನವೀಯ ದೃಷ್ಟಿಯಿಂದ ಕಾಣುವ ಮನೋಭಾವವನ್ನು ಬೆಳೆಸಿ ಕೊಳ್ಳಬೇಕು’ ಎಂದು ಆರ್ಚ್ ಬಿಷಪ್ ಸಾಲ್ವತೋರೆ ಪೆನಾಕಿಯೊ ಹೇಳಿದರು.
ಬೆಂಗಳೂರು ಮಹಾಧರ್ಮಕ್ಷೇತ್ರವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬೆಂಗಳೂರು ಮಹಾಧರ್ಮಕ್ಷೇತ್ರದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸರ್ವ ಧರ್ಮಗಳು ಮಾನವೀಯ ತೆಯ ಸಂದೇಶಗಳನ್ನೇ ಸಾರುತ್ತವೆ. ಆ ಸಂದೇಶಗಳಿಗೆ ಬೇರೆ ಬಣ್ಣಗಳನ್ನು ಬಳಿಯುವುದು ಬೇಡ. ಎಲ್ಲರನ್ನೂ ಸಮಾನವಾಗಿ ಕಾಣಬೇಕು’ ಎಂದು ಬೋಧಿಸಿದರು.
‘ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಜೈನ, ಬೌದ್ಧ ಧರ್ಮಗಳು ಮಾನವೀಯತೆ, ಅಹಿಂಸೆ ಮತ್ತು ಶಾಂತಿಯನ್ನು ಸಾರಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಜೀವನದಲ್ಲಿ ಒಳ್ಳೆಯದನ್ನು ಬಯಸಬೇಕು. ಆಗ, ಜೀವನದಲ್ಲಿ ಸುಖ, ಶಾಂತಿ, ಆನಂದವು ದೊರೆಯುತ್ತದೆ’ ಎಂದರು. ರಾಜ್ಯದ ವಿವಿಧ ಭಾಗಗಳ ಬಿಷಪ್ಗಳು ಭಾಗ ವಹಿಸಿದ್ದರು.
ರಾಜ್ಯದ ಸಾವಿರಾರು ಸಂಖ್ಯೆಯ ಕ್ರಿಶ್ಚಿಯನ್ ಬಾಂಧವರು ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದರು.