ಚಿಕ್ಕನಾಯಕನಹಳ್ಳಿ: ಸರ್ಕಾರದ ಸವಲತ್ತು ಪಡೆಯುವುದು ಪ್ರತಿ ಕಾರ್ಮಿಕ ಸಂಘಟನೆ ಹಕ್ಕಾಗಿದೆ. ಇದಕ್ಕಾಗಿ ಸಂಘಟನೆ ಬಲಗೊಳ್ಳಬೇಕು ಎಂದು ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಸಂಘದ ರಾಜ್ಯ ಕಾರ್ಯದರ್ಶಿ ಎನ್.ಶಿವಣ್ಣ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘಟನೆ ಉದ್ಘಾಟನೆಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಮಿಕರಿಗೆ ಭದ್ರತೆ ಸಿಗಬೇಕಾದರೆ ಕಟ್ಟಡ ಕಾರ್ಮಿಕರು ಸಂಘದಲ್ಲಿ ಹೆಸರು ನೋಂದಾಯಿಸುವ ಅಗತ್ಯವಿದೆ. ದೇಗುಲದಿಂದ ಹಿಡಿದು ಅರಮನೆ, ವಿಧಾನಸೌಧ, ಕೆಂಪು ಕೋಟೆ, ತಾಜ್ಮಹಲ್ ಅನ್ನು ಕಟ್ಟಿರುವುದು ಕಾರ್ಮಿಕರು. ಆದರೆ ಕಾರ್ಮಿಕರಿಗೆ ಸ್ವಂತ ಸೂರಿಲ್ಲದೇ ಬದುಕುವ ಪರಿಸ್ಥಿತಿ ಇಂದಿಗೂ ಇದೆ ಎಂದು ವಿಷಾದಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕಾರ್ಮಿಕರ ನಿಧಿಗೆ ಬಂದ ಹಣ ಕಾರ್ಮಿಕರ ಕಲ್ಯಾಣಕ್ಕೇ ಬಳಕೆಯಾಗಬೇಕು. ಆದರೆ ಕಾರ್ಮಿಕ ಸಚಿವರಿಗೆ ಗಮನವಿದ್ದಂತಿಲ್ಲ ಎಂದು ಟೀಕಿಸಿದರು.
ಕಾರ್ಮಿಕ ನಿರೀಕ್ಷಕಿ ಭಾರತಿ ಮಾತನಾಡಿ, ಕಾಲಕಾಲಕ್ಕೆ ಸೌಲಭ್ಯ ದೊರೆಯಬೇಕಾದರೆ ಕಾರ್ಮಿಕರು ಪ್ರತಿ ಮೂರು ವರ್ಷಗಳಿಗೊಮ್ಮೆ ನೋಂದಾಯಿಸಿಕೊಳ್ಳಬೇಕು .
ಗ್ರೇಡ್–-2 ತಹಶೀಲ್ದಾರ್ ಪುಟ್ಟರಾಮಯ್ಯ ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಗೌಡರಂಗಪ್ಪ, ಅಶ್ವತ್ಥ್ ನಾರಾಯಣ್, ಥಾಮಸ್, ನಾಗರಾಜು, ಸಿ.ಬಿ.ರೇಣುಕಸ್ವಾಮಿ, ಕಣ್ಣಯ್ಯ, ಸಿದ್ದನಕಟ್ಟೆ ಸತೀಶ್, ಪುರಸಭೆ ಸದಸ್ಯರಾದ ಟಿಂಬರ್ ಮಲ್ಲೇಶ್, ರೇಣುಕಮ್ಮ ಸಣ್ಣಮುದ್ದಯ್ಯ ಹಾಜರಿದ್ದರು.