ಬೆಂಗಳೂರು: ಹೊಸ ಪೀಳಿಗೆಯ ಗ್ರಾಹಕರನ್ನು ಸಹಕಾರಿ ಬ್ಯಾಂಕ್ ಅಥವಾ ಸಂಘಗಳತ್ತ ಸೆಳೆಯಬೇಕಾದರೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಕೆ ಅತ್ಯವಶ್ಯಕ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರೂ ಆದ, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ. ಪಾಟೀಲ್ ಅಭಿಪ್ರಾಯಪಟ್ಟರು.
‘ಪ್ರೊಸೆಸ್ವೇರ್ ಸಿಸ್ಟಮ್ಸ್’ ಸಂಸ್ಥೆ ಶನಿವಾರ ಆಯೋಜಿಸಿದ್ದ ‘ಮುಂದಿನ ಪೀಳಿಗೆಗೆ ಬ್ಯಾಂಕಿಂಗ್’ ವಿಚಾರಗೋಷ್ಠಿಯಲ್ಲಿಮಾತನಾಡಿದರು.
‘ಇಂದಿನ ಪೀಳಿಗೆಯ ಗ್ರಾಹಕರನ್ನು ಆಕರ್ಷಿಸಬೇಕಾದರೆ, ರಿಸರ್ವ್ ಬ್ಯಾಂಕ್ ಈ ಸಂಸ್ಥೆಗಳಲ್ಲಿ ಎಟಿಎಂ, ಅಂತರ್ಜಾಲ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಡ್ಡಾಯಗೊಳಿಸಬೇಕು’ ಎಂದು ಹೇಳಿದರು.
ಸಾಮಾನ್ಯವಾಗಿ ಸಹಕಾರಿ ಸಂಘಗಳಲ್ಲಿನ ಗ್ರಾಹಕರು ಸಂಸ್ಥೆಯೊಡನೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಈ ಅಭಿಮಾನವನ್ನು ಸಂಸ್ಥೆಯ ಬೆಳವಣಿಗೆಗೆ ಪೂರಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು ಎಂದರು.
ಪ್ರೊಸೆಸ್ವೇರ್ ಸಂಸ್ಥೆ ಅಭಿವೃದ್ಧಿಪಡಿಸಿದ ಮೊಬೈಲ್ ಬ್ಯಾಂಕಿಂಗ್ ಸಾಫ್ಟ್ವೇರ್ ಅನ್ನು ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.
ಪ್ರೊಸೆಸ್ವೇರ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಆರ್. ಗುರುಮೂರ್ತಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತ್ವರಿತ ಸೇವೆ ಒದಗಿಸುವಂತಾಗಬೇಕು’ ಎಂದರು.
ಆರ್ಬಿಐನ ಪಟ್ಟಣ ಬ್ಯಾಂಕುಗಳ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ. ಶಿವನಂಜಪ್ಪ, ರಾಜ್ಯ ಸರ್ಕಾರದ ಸಹಕಾರಿ ಸಂಘಗಳ ಜಂಟಿ ನೋಂದಣಾಧಿಕಾರಿ ಬಿ.ಸಿ. ಸತೀಶ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್, ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ರಮೇಶ್ ಬಾಬು ಹಾಗೂ ತೆರಿಗೆ ಸಲಹೆಗಾರ ಡಿ.ಆರ್. ವೆಂಕಟೇಶ್ ಉಪಸ್ಥಿತರಿದ್ದರು.