ಮೂಡಿಗೆರೆ: ರೈತನಿಗೆ ಶಕ್ತಿ ತುಂಬುವ ಸಹಕಾರಿರಂಗವು ನಾಡಿನಲ್ಲಿ ಬಹುದೊಡ್ಡ ಶಕ್ತಿಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯ ಪಟ್ಟರು.
ಪಟ್ಟಣದ ರೈತಭವನದಲ್ಲಿ ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘವು ಗುರುವಾರ ಏರ್ಪಡಿಸಿದ್ದ ಸಂಘದ ವಿವಿಧ ಕಟ್ಟಡಗಳ ಕಾಮಗಾರಿಗೆ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘಗಳು ಸಂಘದ ಸದಸ್ಯರಿಗೆ ಸವಲತ್ತುಗಳನ್ನು ಸಮರ್ಪಕವಾಗಿ ವಿತರಿಸುವುದರ ಜೊತೆಗೆ ಸಮಾಜದ ಸರ್ವಜನರಿಗೂ ಉಪಯುಕ್ತ ಕಾರ್ಯಗಳನ್ನು ಮಾಡಿದಾಗ ಇಡೀ ಸಮಾಜದಲ್ಲಿ ಸಹಕಾರಸಂಘ ಮಾದರಿಯಾಗುತ್ತದೆ. ಅಂತಹ ಅನೇಕ ಕಾರ್ಯಗಳನ್ನು ಅಳವಡಿಸಿಕೊಂಡು ತಾಲ್ಲೂಕಿನ ಸರ್ವರಿಗೂ ಸಹಕಾರಿಸಂಘ ಉಪಯುಕ್ತಕಾರಿಯಾಗಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರಜೈನ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳೆಲ್ಲವುದರ ಮಾಹಿತಿಯನ್ನು ಪಡೆಯಲಾಗಿದೆ. ಈಗಷ್ಟೆ ಅಧಿಕಾರ ಪಡೆದಿರುವ ಸರ್ಕಾರವು ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದಲ್ಲಿ ಚರ್ಚಿಸಲಾಗುವುದು. ತಾಲ್ಲೂಕಿನ ಅತೀವೃಷ್ಟಿ, ಕಾಡಾನೆ ಹಾವಳಿ, ಇನಾಂ ಭೂಮಿ ಸಮಸ್ಯೆಗಳ ಬಗ್ಗೆ ತಕ್ಷಣವೇ ಮುಖ್ಯಮಂತ್ರಿಗಳ ಗಮನ ಸೆಳೆದು ಸಂಬಂದಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ಇಡೀ ತಾಲ್ಲೂಕು ಇಂದು ಸಂಕಷ್ಟಕೊಳಗಾಗಿದೆ. ಒಂದೆಡೆ ನಿರಂತರವಾಗಿ ದಾಳಿ ನಡೆಸುತ್ತಿರುವ ಕಾಡಾನೆಗಳಿಂದ ರೈತಾಪಿ ವರ್ಗ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ಹದಿಮೂರು ವರ್ಷಗಳ ಹಿಂದಿನ ದಾಖಲೆ ಮಳೆ ಸುರಿದು, ಮನೆ, ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವುದರಿಂದ ಪ್ರಯೋಜನವಿಲ್ಲದ್ದರಿಂದ, ಶಾಶ್ವತ ಪರಿಹಾರವಾಗಿ ಸ್ಥಳಾಂತರಿಸಬೇಕು, ಬೆಳೆಹಾನಿಯಾದವರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಳೆಯಿಂದ ತಾಲ್ಲೂಕಿನ ಬಹುತೇಕ ಗ್ರಾಮೀಣ ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದು, ಈಗಾಗಲೇ ರೂ. 55 ಕೋಟಿ ನಷ್ಟ ಸಂಭವಿಸಿದೆ. ಬೆಳೆ ಹಾನಿಯಿಂದ ರೂ. 20 ಕೋಟಿ ಹಾನಿಯಾಗಿದ್ದು, ಕಳೆದ ಮೂರೇ ತಿಂಗಳಿನಲ್ಲಿ ತಾಲ್ಲೂಕಿಗೆ ರೂ. 80 ಕೋಟಿಯಷ್ಟು ನಷ್ಟವಾಗಿದೆ ಎಂದರು.
ತಾಲ್ಲೂಕಿನ ಬಹುದೊಡ್ಡ ಸಮಸ್ಯೆಯಾದ ಕಳಸದ ಇನಾಂ ಭೂಮಿ ಸಮಸ್ಯೆಯನ್ನು ಕೂಡಲೇ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು, ಅಲ್ಲಿನ ನಿವಾಸಿಗಳ ಹಿತ ಕಾಯುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದರು.
ಬೆಳೆಗಾರರ ಸಂಘದ ವತಿಯಿಂದ ಬೆಳೆ ಹಾನಿಯ ಬಗ್ಗೆ ಮನವಿ ನೀಡಲಾಯಿತು. ಸಂಘದ ಅಧ್ಯಕ್ಷ ಎಂ.ವಿ. ಜಗದೀಶ್, ತಾ.ಪಂ. ಅಧ್ಯಕ್ಷ ಎಂ.ಎ. ಶೇಷಗಿರಿಕಳಸ, ಸಹಕಾರಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಬಿ.ಎನ್. ಜಯಂತ್, ಎನ್.ಜೆ. ಜಯರಾಂ, ಜಿ.ಪಂ, ತಾ.ಪಂ. ಸದಸ್ಯರು ಇದ್ದರು
ಗರಂ ಆದ ಶಾಸಕರು: ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ಹಾನಿಯಾಗಿರುವ ಪ್ರದೇಶಗಳ ವಸ್ತುಸ್ಥಿತಿಯನ್ನು ಪರಿಚಯಿಸಬೇಕೆಂದು ಬೆಳಗ್ಗೆ ಹತ್ತು ಗಂಟೆಗೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಡಿಎಫ್ಒ ಅವರೊಂದಿಗೆ ಶಾಸಕ ಬಿ.ಬಿ.ನಿಂಗಯ್ಯ ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಸಭಾಪತಿಗಳಿಗಾಗಿ ಕಾಯ್ದುಕುಳಿತಿದ್ದರು.
ಆದರೆ ಮಾರ್ಗ ಮಧ್ಯದಲ್ಲಿಯೇ ಆಯಾ ಪಕ್ಷಗಳ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಸಭಾಪತಿಗಳನ್ನು ಪ್ರತ್ಯೇಕವಾಗಿ ಕರೆದೊಯ್ದಿದ್ದರಿಂದ ಶಾಸಕರು ಹೀಗೆ ರಾಜಕೀಯ ಮಾಡಿದರೆ ತಾಲ್ಲೂಕು ಅಭಿವೃದ್ಧಿ ಸಾಧ್ಯವೇ ಎಂದು ಬಹಿರಂಗವಾಗಿಯೇ ಗರಂ ಆದರು. ಪ್ರತ್ಯೇಕವಾಗಿ ಹೋಗಿದ್ದ ಜಿಲ್ಲಾ ಉಸ್ತುವಾರಿಮಂತ್ರಿಗಳು ಹಾಗೂ ಸಭಾಪತಿಗಳು ಒಟ್ಟಾಗಿ ಬಂದಾಗ ಕೋಪ ಶಮನವಾಗಿ ಸಮಸ್ಯೆ ಬಗೆಹರಿದರೆ ಸಾಕು ಎಂದು ನಗೆ ಬೀರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.