ನವದೆಹಲಿ (ಪಿಟಿಐ): 2ಜಿ ತರಂಗಗುಚ್ಚ ಹಗರಣದ ತನಿಖೆಯಲ್ಲಿ ‘ಸಹಾರಾ’ ಸಂಸ್ಥೆ ಮುಖ್ಯಸ್ಥ ಸುಬ್ರಾತೊ ರಾಯ್ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಡೆಹಿಡಿದಿರುವುದರಿಂದ ಹೂಡಿಕೆ ದಾರರ ಹಣ ಹಿಂದಿರುಗಿಸದ ರಾಯ್ ಹಾಗೂ ಅವರ ಸಂಸ್ಥೆಯ ಉದ್ಯೋಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವಂತಾಗಿದೆ.
ಹೂಡಿಕೆದಾರರ ಹಣ ಹಿಂದಿರುಗಿಸಲು ಕ್ರಮ ಕೈಗೊಳ್ಳದ ರಾಯ್ ಹಾಗೂ ಅವರ ಸಹಾರಾ ಸುದ್ದಿ ವಾಹಿನಿಯ ಇಬ್ಬರು ಉದ್ಯೋಗಿಗಳಿಗೆ ಜಿ.ಎಸ್. ಸಿಂಘ್ವಿ ಹಾಗೂ ಕೆ.ಎಸ್. ರಾಧಾಕೃಷ್ಣನ್ ಅವರನ್ನು ಒಳಗೊಂಡ ಪೀಠ ನೋಟಿಸ್ ನೀಡಿದೆ.
2ಜಿ ತರಂಗಗುಚ್ಚ ಹಗರಣದ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ರಾಜೇಶ್ವರ್ ಸಿಂಗ್ ಅವರು ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿತು.
ವಾಹಿನಿಯ ಪತ್ರಕರ್ತರಾದ ಉಪೇಂದ್ರ ರಾಯ್, ಸುಬೋದ್ ಜೈನ್ ಎಂಬವರು ತಮಗೆ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ತನಿಖಾಧಿಕಾರಿ ಸಲ್ಲಿಸಲಾದ ಅರ್ಜಿಯಲ್ಲಿ ಆರೋಪಿಸಲಾಗಿದೆ.
ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರಿಂದ ರಾಯ್ ಹಾಗೂ ಅವರ ಇಬ್ಬರು ಉದ್ಯೋಗಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಸಿಂಗ್ ಅವರಿಗೆ ಸಂಬಂಧಿಸಿದಂತೆ ಸಹಾರಾ ವಾಹಿನಿ ಯಾವುದೇ ಸುದ್ದಿ ಪ್ರಸಾರ ಮಾಡುವಂತಿಲ್ಲ ಎಂದೂ ಪೀಠ ಆದೇಶಿಸಿದೆ. ತನಿಖಾಧಿಕಾರಿ ಸಿಂಗ್ ಅವರಿಗೆ ವಾಹಿನಿಯ ಜೈನ್ 25 ಪ್ರಶ್ನೆಗಳನ್ನು ಕಳುಹಿಸಿದ್ದು, ಇದಕ್ಕೆ ಅವರು ಉತ್ತರ ನೀಡಬೇಕಾಗಿದೆ.
ಜೈನ್ ಅವರ ಈ ಕ್ರಮ ಬ್ಲಾಕ್ಮೇಲ್ ಮಾಡುವ ಯತ್ನ ಎಂದು ಕೋರ್ಟ್ ಹೇಳಿದೆ.
ಸಹಾರಾ ಸಂಸ್ಥೆಯ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್ ರಾಯ್ ಅವರಿಗೆ ಸಮನ್ಸ್ ಜಾರಿಮಾಡಿದ್ದು ತನ್ನ ಅನುಮತಿ ಇಲ್ಲದೆ ದೇಶ ಬಿಟ್ಟು ತೆರಳದಂತೆ ನಿರ್ಬಂಧ ವಿಧಿಸಿದೆ. ಸಹಾರಾ ಸಂಸ್ಥೆಯ ಯಾವುದೇ ಆಸ್ತಿಪಾಸ್ತಿಯ ಮಾರಾಟಕ್ಕೂ ಕೋರ್ಟ್ ನಿರ್ಬಂಧ ವಿಧಿಸಿದೆ.