ರಾಯಚೂರು: ಸಾವಯವ ಪದ್ಧತಿಯಿಂದ ಬೆಳೆಯುವ ಆಹಾರ ಪದಾರ್ಥಗಳ ಉಪಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜು ಅಭಿಪ್ರಾಯಪಟ್ಟರು.
ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿವಿಧ ಸಂಘಟನೆಗಳು ಮತ್ತು ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ನಡೆದ ‘ಆರೋಗ್ಯಕ್ಕಾಗಿ ಎಂತಹ ಆಹಾರ ಉಪಯೋಗಿಸಬೇಕು’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮನುಷ್ಯ ದುರಾಸೆಯಿಂದ ಅಧಿಕ ಉತ್ಪಾದನೆಗಾಗಿ ರಾಸಾಯನಿಕ ಬಳಕೆ ಪ್ರಮಾಣ ಹೆಚ್ಚು ಮಾಡಿದ ಪರಿಣಾಮ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದ ಬೆಳೆಯುವ ಆಹಾರ ಪದಾರ್ಥಗಳ ಮೇಲೆಯೂ ಪರಿಣಾಮ ಬೀರುತ್ತಿದೆ’ ಎಂದು ಹೇಳಿದರು.
ದೇಶದಲ್ಲಿ ಶೇ 50ರಷ್ಟು ಮಂದಿ ಮಧುಮೇಹ (ಡಯಾಬಿಟಿಸ್)ಹೊಂದಿದ್ದಾರೆ ಎಂದ ಅವರು, ಹೆಚ್ಚು ರಾಸಾಯನಿಕ ಬಳಸಿದ ಪರಿಣಾಮ ಆಹಾರ ಪದಾರ್ಥಗಳು ಕಲುಷಿತಗೊಂಡಿವೆ. ಉತ್ತಮ ಆಹಾರಕ್ಕಾಗಿ ಕೃಷಿಯಲ್ಲಿ ಸಾವಯವ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಷಪೂರಿತ ಆಹಾರ ಪದಾರ್ಥಗಳ ಬಳಕೆ ಕೈ ಬಿಡಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು. ಪರಿಸರ ಕಾಳಜಿಯನ್ನು ಪ್ರತಿಯೊಬ್ಬರು ಬೆಳಸಿಕೊಳ್ಳಬೇಕು. ದಿನನಿತ್ಯ ಚಟುವಟಿಕೆಗಳಲ್ಲಿ ವ್ಯಾಯಾಮ, ಯೋಗವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮೈಸೂರಿನ ಹಿರಿಯ ವಿಜ್ಞಾನಿ ಡಾ.ಖಾದರ್ ಮಾತನಾಡಿ, ವಾತಾವರಣ ಬದಲಾವಣೆಯಾಗಬೇಕಿದೆ. ಕಲುಷಿತ ಆಹಾರ ಪದಾರ್ಥದ ಬಳಕೆಯಿಂದ ಅನೇಕ ರೋಗಗಳಿಗೆ ತುತ್ತಾಗುವ ಸ್ಥಿತಿ ಬಂದಿದೆ. ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ಉಪಯೋಗ ಉತ್ತಮ ಪರಿಹಾರ ಎಂದರು.
ಕೃಷಿ ಭಾರತ ಪತ್ರಿಕೆ ಸಂಪಾದಕ ಚಂದ್ರಶೇಖರ ಬಾಳೆ ಅಧ್ಯಕ್ಷತೆ ವಹಿಸಿದ್ದರು.ಬಂದಪ್ಪಗೌಡ ಐರೆಡ್ಡಿ ನಿರೂಪಿಸಿದರು.