ಹುಬ್ಬಳ್ಳಿ: ಸಾಹಿತ್ಯದ ಸಹವಾಸ ಪ್ರತಿಯೊಬ್ಬರಲ್ಲೂ ಮಾನವೀಯ ಗುಣಗಳನ್ನು ಬೆಳೆಸುತ್ತದೆ ಎಂದು ಧಾರವಾಡದ ನಿವೃತ್ತ ಪ್ರಾಚಾರ್ಯ ಪ್ರೊ.ಪರಮಾನಂದ ಮಸ್ಕಿ ಅಭಿಪ್ರಾಯಪಟ್ಟರು.
ಇಲ್ಲಿನ ಹಳೇಹುಬ್ಬಳ್ಳಿ ನಾರಾಯಣ ಪೇಟೆಯ ಭಾಗೀರಥಮ್ಮ ಹೂಲಿ ಸಭಾ ಭವನದಲ್ಲಿ ಸೋಮವಾರ ಸಂಜೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರೀ ಮಹಾಂತಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ, ಧರ್ಮ, ಪ್ರಾಂತ್ಯ, ಭಾಷೆಯ ಭೇದ ಮರೆತು ಕೂಡಿ ಬದುಕುವುದು ಭಾವೈಕ್ಯತೆಗೆ ನಾಂದಿಯಾಗುತ್ತದೆ ಎಂದು ಹೇಳಿದ ಅವರು, ಸಾಹಿತ್ಯದಲ್ಲಿ ಭಾವೈಕ್ಯತೆ ಹಾಗೂ ಸಹಬಾಳ್ವೆ ಕುರಿತು ಹೆಚ್ಚು ಬರೆಯುವಂತೆ ಯುವ ಬರಹಗಾರರಿಗೆ, ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಸಾಹಿತ್ಯ ಹಾಗೂ ಸಂಗೀತ ಮನುಷ್ಯನ ಬದುಕಿನಲ್ಲಿ ನೆಮ್ಮದಿಗೆ ಕಾರಣವಾಗುತ್ತವೆ ಎಂದು ಹೇಳಿದ ಅವರು, ಶರಣರ ವಚನಗಳನ್ನು ಹಾಡಿದರು.
ಸಮಾರಂಭದಲ್ಲಿ ಹಿರಿಯ ವಕೀಲ ಎಂ.ಎಂ.ಹೂಲಿ ಅಧ್ಯಕ್ಷತೆ ವಹಿಸಿದ್ದರು. ದತ್ತಿಯ ದಾನಿಯೂ ಆದ ಧಾರವಾಡದ ಮಹಾಂತಪ್ಪ ಕೋ–ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಕೆ.ಬಿ.ಹೊಸಗೌಡ್ರ, ಬಣಗಾರ ಸಮಾಜದ ಅಧ್ಯಕ್ಷ ಸುರೇಶ ಚನ್ನಿ, ವಿನಾಯಕ ಹೂಲಿ, ವೀರಣ್ಣ ಹೂಲಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಕೆ.ಎಸ್.ಕೌಜಲಗಿ, ಲೇಖಕ ಸುರೇಶ ಹೊರಕೇರಿ ಮತ್ತಿತರರು ಹಾಜರಿದ್ದರು.
ಶ್ರುತಿ ಮೇಗುಂಡಿ ಗಾಯನ ಪ್ರಸ್ತುತಪಡಿಸಿದರು. ಸುರೇಶ ನಿಡಗುಂದಿ ತಬಲಾ ಹಾಗೂ ಬಾವಖಾನ ಹಾರ್ಮೋನಿಯಂ ಸಾಥ್ ನೀಡಿದರು.