ತುಮಕೂರು: ಸಿದ್ದರಾಮ ದೈವತ್ವಕ್ಕೇರಿದ ವಿಭೂತಿ ಪುರುಷ. ಕಲ್ಯಾಣದ ಶರಣರ ಪ್ರಭಾವದಿಂದಾಗಿ ಕರ್ಮಯೋಗದಿಂದ ಶಿವಯೋಗದತ್ತ ಹೊರಳಿ ಮಹಾಯೋಗಿ ಎನಿಸಿಕೊಂಡರು ಎಂದು ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಸವ ಕೇಂದ್ರದ ವತಿಯಿಂದ ಜಯದೇವ ಹಾಸ್ಟೆಲ್ನಲ್ಲಿ ಈಚೆಗೆ ನಡೆದ ಗಂಗಮ್ಮ ಮಧೂಡಯ್ಯ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಸಿದ್ದರಾಮ ದೀನದಲಿತರಿಗಾಗಿ ಕೈಗೊಂಡಿದ್ದ ಸಮಾಜ ಕಲ್ಯಾಣ ಕಾರ್ಯ ಅಲ್ಲಮನಂತಹ ಜ್ಞಾನ ಸದೃಶ ವ್ಯಕ್ತಿಯನ್ನು ಸೆಳೆಯಿತು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಡಿ.ಎನ್.ಯೋಗೀಶ್ ಮಾತನಾಡಿ, ನಾಡಿನ ಚರಿತ್ರೆಯಲ್ಲೇ ನಿರ್ವಿಕಲ್ಪ ಸಮಾಧಿ ಮಾಡಿಕೊಂಡ ಮೊಟ್ಟಮೊದಲ ವ್ಯಕ್ತಿ ಸಿದ್ದರಾಮ. ಬಹುಪಾಲು ವಚನಗಳು ಗುರುಲಿಂಗ ಜಂಗಮದ ಸತ್ವವನ್ನು ಮೆರೆಯುತ್ತವೆ ಎಂದರು.
ಬಸವಕೇಂದ್ರದ ಅಧ್ಯಕ್ಷೆ ಸಿದ್ದಗಂಗಮ್ಮ, ಶರಣೆ ಅಕ್ಕನಾಗಮ್ಮ, ದತ್ತಿ ದಾನಿ ಜಿ.ಎಸ್.ಮಧೂಡಯ್ಯ, ಗಂಗಮ್ಮ ಉಪಸ್ಥಿತರಿದ್ದರು. ಚಿಕ್ಕಬೆಳ್ಳಾವಿ ಶಿವಕುಮಾರ್ ವಂದಿಸಿದರು.