ಕೊಪ್ಪಳ: ಜಿಲ್ಲೆಯಲ್ಲಿ ನಡೆಸಲಾಗಿರುವ ಲೋಕ್ ಅದಾಲತ್ ಯಶಸ್ವಿಯಾಗಿದ್ದು, ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿರುವದರಿಂದ ಜಿಲ್ಲಾ ನ್ಯಾಯಾಲಯ ಸುಪ್ರೀಂ ಕೋರ್ಟ್ನ ಪ್ರಶಂಸೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಗುರುವಾರ ಇಲ್ಲಿ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಕಳೆದ ಲೋಕ ಅದಾಲತ್ದಲ್ಲಿ 4 ಸಾವಿರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 1189 ಪ್ರಕರಣಗಳು ಇತ್ಯರ್ಥಗೊಂಡಿವೆ. ಜ.9ರಿಂದ ಮತ್ತೆ ಲೋಕ ಅದಾಲತ್ ಏರ್ಪಡಿಸಲಾಗಿದೆ. ಮಾರ್ಚ್ 29ರವರೆಗೆ ನಡೆಯುತ್ತದೆ. ಪ್ರತಿ ದಿನ ಸಂಜೆ 4.30 ರಿಂದ ಪ್ರಕರಣ ಇತ್ಯಾರ್ಥವಾಗುವವರೆಗೂ ಅದಾಲತ್ ಮುಂದುವರೆಯುತ್ತದೆ. ಜಿಲ್ಲೆಯ ಕಕ್ಷಿದಾರರು, ವಕೀಲರು ಇದರ ಪ್ರಯೋಜನ ಪಡೆಯಬೇಕು ಎಂದರು.
ಲೋಕ ಅದಾಲತ್ನಿಂದಾಗಿ ನ್ಯಾಯಾಲಯ ವೆಚ್ಚ, ವಕೀಲರ ಶುಲ್ಕ ಮತ್ತ ಸಮಯ ಉಳಿತಾಯವಾಗುತ್ತದೆ, ಸೂಕ್ತ ಹಾಗೂ ಶಾಶ್ವತ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ಧತೆ ನೆಲೆಸಿ ಮುಕ್ತ ನ್ಯಾಯ ದೊರಕಿಸಿಕೊಡುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.
ಲೋಕ್ಅದಾಲತ್ನಲ್ಲಿ ಅನೇಕ ಬ್ಯಾಂಕ್ , ಭಾರತ್ ಸಂಚಾರ ನಿಗಮ ಲಿಮಿಟೆಡ್ ಮತ್ತು ವೈವಾಹಿಕ, ಕೌಟುಂಬಿಕ ಪ್ರಕರಣಗಳು ಹೆಚ್ಚಾಗಿ ಪರಿಹಾರ ಕಂಡಿವೆ. ಆದರೆ ವೈವಾಹಿಕ ಮತ್ತ ಕೌಟುಂಬಿಕ ಸಂಬಂಧಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಅಲ್ಲದೇ ಒತ್ತಾಯದ ಮತ್ತು ಒಪ್ಪಿಗೆ ಇಲ್ಲದಿದ್ದರೂ ಸಾಮೂಹಿಕ ವಿವಾಹದಲ್ಲಿ ಪಾಲಕರು ಮದುವೆ ಮಾಡುವುದರಿಂದಲೂ ವಿಚ್ಛೇದನ ಪ್ರಕರಣಗಳು ಹೆಚ್ಚಲು ಕಾರಣ ಎಂದು ನ್ಯಾಯಾಧೀಶರು ಹೇಳಿದರು.
ಹಿರಿಯ ನ್ಯಾಯಾಧೀಶ ಬಸವರಾಜ ಚೇಗರೆಡ್ಡಿ, ಸಂಧ್ಯಾ ಮಾದಿನೂರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಇತರರು ಇದ್ದರು.