ಚಾಮರಾಜನಗರ: ‘ಕ್ರೀಡೆಯಲ್ಲಿ ಸೋಲು- ಗೆಲುವು ಸಹಜ. ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಭೃಂಗೇಶ್ ಹೇಳಿದರು.
ನಗರದಲ್ಲಿ ಈಚೆಗೆ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವೃತ್ತಿಪರ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು.
ಕ್ರೀಡೆಯು ಬಾಂಧವ್ಯ ಬೆಳೆಯುವ ಕೊಂಡಿಯಾಗಬೇಕು ಎಂದ ಅವರು, ದೇಶದ ಒಳಿತಿಗಾಗಿ ಗೌರವಧನದ ಆಧಾರದಲ್ಲಿ ಗೃಹರಕ್ಷಕರು ದುಡಿಯುತ್ತಿದ್ದಾರೆ. ನಿಮ್ಮ ಕಾಯಕ ಪ್ರಜ್ಞೆಗೆ ತಲೆಬಾಗಲೇಬೇಕು. ಸಮಾಜ ದಲ್ಲಿ ಎತ್ತರಕ್ಕೆ ನಿಲ್ಲಬಲ್ಲ ಮನಸ್ಸು ನಿಮ್ಮದು. ನಿಮ್ಮ ಶ್ರೇಷ್ಠ ಕರ್ತವ್ಯಕ್ಕೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ದೊರೆಯಲಿ ಎಂದರು.
ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಅಶ್ವತ್ಥನಾರಾಯಣ ಮಾತನಾಡಿ, ಸೋಲು- ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಭಾಗವಹಿಸುವ ಉತ್ಸಾಹ ಜೀವಂತವಾಗಿರಿಸಿಕೊಳ್ಳಬೇಕು ಎಂದು ಹೇಳಿದರು.
ವರ್ತಕರ ಸಂಘದ ಅಧ್ಯಕ್ಷ ವಿ. ಪ್ರಭಾಕರ್ ಮಾತನಾಡಿ, ಇಲ್ಲಿನ ಗೃಹರಕ್ಷಕರು ಮಧ್ಯಪ್ರದೇಶದಂತಹ ಹೊರರಾಜ್ಯದ ಚುನಾವಣೆಯ ಕರ್ತವ್ಯಕ್ಕೆ ಹೋಗಿಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಬಿ.ಎಸ್. ಬಸವರಾಜು, ಯುವಶಕ್ತಿ ಪರಿಷತ್ನ ಎಲ್. ಸುರೇಶ್, ಕಂಪೆನಿ ಕಮಾಂಡ್ ಶಿವಣ್ಣ, ಬೋಧಕರಾದ ರಾಮಣ್ಣ, ಕಲೆ ನಟರಾಜು, ನಂಜುಂಡಸ್ವಾಮಿ, ಬಿಳಿಗಿರಿರಂಗಯ್ಯ, ಮರಿಸ್ವಾಮಿ, ಶಿವರಾಜ್ ಇದ್ದರು. ಮೋಹನ್ರಾಜ್ ವಿಜೇತರಿಗೆ ಬಹುಮಾನ ವಿತರಿಸಿದರು.